ನವದೆಹಲಿ: ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಜಿ 20 ಶೃಂಗಸಭೆಯ ಮೊದಲು ಮಂತ್ರಿ ಮಂಡಳಿಯ ಸಭೆಯಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಅವರು ಇತಿಹಾಸಕ್ಕೆ ಹೋಗಬೇಡಿ, ಆದರೆ ಸಂವಿಧಾನದ ಪ್ರಕಾರ ಸತ್ಯಗಳಿಗೆ ಅಂಟಿಕೊಳ್ಳಿ. ಸಮಸ್ಯೆಯ ಸಮಕಾಲೀನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿ ಅಂತ ಕಿವಿಮಾತು ಹೇಳಿದ್ದಾರೆ.
ಇನ್ನು, ಇಂಡಿಯಾ ಮತ್ತು ಭಾರತ ವಿವಾದದ ಬಗ್ಗೆ ಪ್ರತಿಕ್ರಿಯಿಸದಂತೆ ಸಚಿವರಿಗೆ ಸಲಹೆ ಕೂಡ ನೀಡಿದ್ದಾರೆ. ಅಧಿಕೃತ ವ್ಯಕ್ತಿ ಮಾತ್ರ ಈ ವಿಷಯದ ಬಗ್ಗೆ ಮಾತನಾಡಿದರೆ ಸಾಕು ಎಂದಿದ್ದಾರೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು ಆಯೋಜಿಸಿದ್ದ ‘ಸನಾತನ ನಿರ್ಮೂಲನಾ ಸಮ್ಮೇಳನ’ದಲ್ಲಿ ಉದಯನಿಧಿ ಸ್ಟಾಲಿನ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು.
ನೀವು ಈ ಕಾರ್ಯಕ್ರಮವನ್ನು ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಆಯೋಜಿಸಿದ್ದೀರಿ. ಇದಕ್ಕೆ ನನಗೆ ಬಹಳ ಇಷ್ಟವಾಯಿತು. ಕೆಲವು ವಿಚಾರಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಸರಿ. ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಸದ್ಯ ಈ ವಿಚಾರ ಎಲ್ಲಡೆ ಸದ್ದು ಮಾಡುತ್ತಿದೆ.