ಜೈಪುರ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರು ಸನಾತನ ಧರ್ಮದ ಬಗ್ಗೆ ಸಾಕಷ್ಟು ಅಪ ಪ್ರಚಾರ ಮಾಡುತ್ತಿದ್ದಾರೆ, ಸನಾತನ ಧರ್ಮವನ್ನು ಮುಗಿಸುವುದಾಗಿ ಉದಯನಿಧಿ ಹೇಳಿಕೆ ನೀಡಿದ್ದಾರೆ. ಹಿಂದೂ ಸಂಘಟನೆಗಳನ್ನು ಲಷ್ಕರ್ ಸಂಘಟನೆಗಳಿಗೆ ಹೋಲಿಸಿದ್ದಾರೆ ಎಂದು ಆಕ್ರೋಶ ಭರಿತ ನುಡಿಗಳನ್ನಾಡಿದ್ದಾರೆ. ಕಳೆದ ಎರಡು ದಿನಗಳಿಂದ ಅವರು (ಪ್ರತಿಪಕ್ಷಗಳು) ದೇಶದ ಸಂಸ್ಕೃತಿ, ಇತಿಹಾಸ ಮತ್ತು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆ.
ಮೋದಿ ಗೆದ್ದರೆ ‘ಸನಾತನ’ ಆಡಳಿತ ಬರುತ್ತದೆ ಎಂದು ಅವರು ಹೇಳುತ್ತಾರೆ. ‘ಸನಾತನ’ ಜನರ ಹೃದಯವನ್ನು ಆಳುತ್ತಿದೆ. ಮೋದಿ ಅವರು ಸಂವಿಧಾನದ ಆಧಾರದ ಮೇಲೆ ದೇಶವನ್ನು ನಡೆಸುತ್ತಾರೆ. ಪ್ರಧಾನಿ ರಾಷ್ಟ್ರದ ಭದ್ರತೆಗೆ ಶ್ರಮಿಸುತ್ತಿದ್ದಾರೆ ಎಂದರು.
ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್ ವರ್ಷಗಳಿಂದ ದೇವಸ್ಥಾನಕ್ಕೆ ತಡೆ ಒಡ್ಡಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದ ನಂತರ ಮೋದಿ ಅವರು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ್ದು, ರಾಮ ಹುಟ್ಟಿದ ನೆಲದಲ್ಲಿಯೇ ಜನವರಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಲಿದೆ. ಅದನ್ನು ತಡೆಯಲು ಇಂಡಿಯಾ ಮೈತ್ರಿಗೆ ಸಾಧ್ಯವಿಲ್ಲ ಎಂದರು.