ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಳೇ ಸಂಸತ್ ಭವನದ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ನಾವು ಹೊಸ ಸಂಸತ್ ಭವನ ಪ್ರವೇಶಿಸುತ್ತಿದ್ದೇವೆ. ನವ ಭಾರತದ ಸಂಕಲ್ಪದೊಂದಿಗೆ ನಾವು ಹೊಸ ಸಂಸತ್ ಭವನದಲ್ಲಿ ಅಧಿವೇಶನಕ್ಕೆ ಮುನ್ನಡಿ ಬರೆಯಲಿದ್ದೇವೆ.
ಈ ಸಂಸತ್ ಭವನ ನಮ್ಮ ಕರ್ತವ್ಯಕ್ಕೆ ಪ್ರೇರಣೆ ನೀಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಈ ಸಂಸತ್ ಭವನದಲ್ಲಿ ಹಲವು ಚರ್ಚೆಗಳು, ಮಸೂದೆಗಳನ್ನ ಮಂಡಿಸಿ ಹೊಸ ಕಾನೂನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಇದೇ ಸೆಂಟ್ರಲ್ ಹಾಲ್ನಲ್ಲಿ ನಮಗೆ ಬ್ರಿಟಿಷರು ಅಧಿಕಾರ ಹಸ್ತಾಂತರಿಸಿದ್ದರು ಎಂದು ಮೋದಿ ಹೇಳಿದ್ದಾರೆ.
1952ರ ಬಳಿಕ 41 ರಾಷ್ಟ್ರಗಳ ಪ್ರಮುಖರು ನಮ್ಮ ಸಂಸದರನ್ನುದ್ದೇಶಿ ಮಾತನಾಡಿದ್ದಾರೆ. ಇನ್ನು 86 ಬಾರಿ ರಾಷ್ಟ್ರಪತಿ ಸಂಸದರನ್ನುದ್ದೇಶಿ ಮಾತನಾಡಿದ್ದಾರೆ. ಬರೋಬ್ಬರಿ 4,000 ಕಾನೂನುಗಳು ಈ ಸಂಸತ್ ಭವನದಲ್ಲಿ ಪಾಸ್ ಆಗಿದೆ. ಜಂಟಿ ಅಧಿವೇಶನದ ಮೂಲಕ ಕಾನೂನು ಪಾಸ್ ಆಗಿದೆ. ಉಗ್ರರ ವಿರುದ್ಧ ಹೋರಾಟದ ಬಿಲ್, ತ್ರಿವಳಿ ತಲಾಖ್ ಸೇರಿದಂತೆ ಹಲವು ಕಾನೂನುಗಳಿಗೆ ಇದೇ ಹಾಲ್ ಸಾಕ್ಷಿಯಾಗಿದೆ ಎಂದರು.
ಆರ್ಟಿಕಲ್ 370 ಮುಕ್ತಿ ನೀಡುವ ನಿರ್ಧಾರ, ಉಗ್ರರ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡುವ ಮಹತ್ವದ ನಿರ್ಧಾರಕ್ಕೂ ಈ ಸಂಸತ್ ಭವನ ಸಾಕ್ಷಿಯಾಗಿದೆ. ಇಂದು ಭಾರತ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಆದರೆ 3ನೇ ಅತೀ ದೊಡ್ಡ ಆರ್ಥಿಕತೆಯಾಗುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ನಾನು ಸಂಪೂರ್ಣ ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ, ಭಾರತ ಖಂಡಿತವಾಗಿ 3ನೇ ಅರ್ಥವ್ಯವಸ್ಥೆಯಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.