ನವದೆಹಲಿ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು ಅಂದು ಬಹಳಷ್ಟು ಕಡೆ ಅರೆ ರಜೆ ಘೋಷಿಸಲಾಗಿದ್ದು, ಅಂತೆಯೇ ಬ್ಯಾಂಕುಗಳಿಗೂ ಅರ್ಧ ದಿನ ರಜೆ ಇರುತ್ತದೆ. ಹೀಗಾಗಿ, ಅಂದು 2,000 ರೂ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ಆರ್ಬಿಐ ಈ ವಿಷಯವನ್ನು ಇಂದು ಸ್ಪಷ್ಟಪಡಿಸಿದೆ.
‘ಭಾರತ ಸರ್ಕಾರ ಅರ್ಧ ದಿನ ರಜೆ ಘೋಷಿಸಿರುವುದರಿಂದ ಆರ್ಬಿಐನ ಯಾವುದೆ 19 ಇಷ್ಯೂ ಆಫೀಸ್ಗಳಲ್ಲಿ 2,000 ರೂ ನೋಟು ವಿನಿಮಯ ಇರುವುದಿಲ್ಲ,’ ಎರಡು ಸಾವಿರ ರೂ ನೋಟು ವಿನಿಮಯದ ಸೌಲಭ್ಯ ಜನವರಿ 23ರಂದು ಮುಂದುವರಿಯುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಆರ್ಬಿಐ 2023ರ ಮೇ 19ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಎಲ್ಲಾ ಬ್ಯಾಂಕುಗಳಲ್ಲೂ ನೋಟು ವಿನಿಮಯ ಮಾಡಲು ಅಥವಾ ಠೇವಣಿ ಇಡಲು ಅವಕಾಶ ಕೊಟ್ಟಿತ್ತು. ಇದೀಗ ಆರ್ಬಿಐನ 19 ಇಷ್ಯೂ ಆಫೀಸ್ಗಳಲ್ಲಿ ಮಾತ್ರವೇ ನೋಟು ವಿನಿಮಯಕ್ಕೆ ಅವಕಾಶ ಇದೆ.