ದೆಹಲಿ: 2016ರಲ್ಲಿ ಸ್ವಚ್ಛ ಭಾರತ್ ಮಿಷನ್-ಅರ್ಬನ್ ಭಾಗವಾಗಿ ಪ್ರಾರಂಭಿಸಲಾದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡಿದ ಸ್ವಚ್ಛ ಸರ್ವೇಕ್ಷಣ್ 2023 ಪ್ರಶಸ್ತಿಗಳ ಭಾಗವಾಗಿ ಮಧ್ಯಪ್ರದೇಶದ ಇಂದೋರ್ ಮತ್ತು ಸೂರತ್ನ್ನು ಭಾರತದ ಸ್ವಚ್ಛ ನಗರಗಳೆಂದು ಗುರುತಿಸಲಾಗಿದೆ.
ಇಂದೋರ್ ಏಳನೇ ಬಾರಿಗೆ ಸ್ವಚ್ಛ ನಗರಿ ಪ್ರಶಸ್ತಿ ಗರಿಯನ್ನು ಪಡೆದುಕೊಂಡಿದೆ.ಸೂರತ್ ಇದೇ ಮೊದಲ ಬಾರಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ನವಿ ಮುಂಬೈ ದೇಶದ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಮಹಾರಾಷ್ಟ್ರವು ಸ್ವಚ್ಛ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನಂತರ ಸ್ವಚ್ಛ ರಾಜ್ಯ ಪ್ರಶಸ್ತಿ ಮಧ್ಯಪ್ರದೇಶ ಪಡೆದುಕೊಂಡಿದೆ.
ಚಂಡೀಗಢವು ನೈರ್ಮಲ್ಯ ಕಾರ್ಮಿಕರಿಗೆ ಅತ್ಯುತ್ತಮ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ನಗರಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಾರಣಾಸಿಯನ್ನು ಅತ್ಯಂತ ಸ್ವಚ್ಛವಾದ “ಗಂಗಾ ಪಟ್ಟಣ” ಎಂದು ಹೆಸರಿಸಲಾಗಿದೆ.
ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಗರ ಮತ್ತು ರಾಜ್ಯಗಳ ಪ್ರತಿನಿಧಿಗಳಿಗೆ ಈ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು.