ನವದೆಹಲಿ: G20 ಶೃಂಗಸಭೆಯಲ್ಲಿ ಭಾಗವಹಿಸುವ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ ರಾಷ್ಟ್ರಪತಿ ಕಚೇರಿಯಿಂದ ನೀಡಿದ ಅಧಿಕೃತ ಆಹ್ವಾನದಲ್ಲಿ ಇಂಡಿಯಾ ಪದದ ಬದಲಿಗೆ ಭಾರತದ ಅಧ್ಯಕ್ಷ ಪದವನ್ನು ಬಳಸಲಾಗಿದೆ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ G20 ವಿದೇಶಿ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಇಂಡಿಯಾ ಬದಲಿಗೆ ಭಾರತದ ಅಧ್ಯಕ್ಷರು ಎಂಬ ಪದಬಳಕೆ ಮಾಡಲಾಗಿದೆ. ಈ ವಿಚಾರದ ಕುರಿತು ರಾಷ್ಟ್ರಮಟ್ಟದಲ್ಲಿ ಪರ ವಿರೋಧದ ದೊಡ್ಡ ಚರ್ಚೆ ನಡೆಯುತ್ತಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ವಿರೋಧ ಪಕ್ಷದ ಮೈತ್ರಿಕೂಟ ಇಂಡಿಯಾವನ್ನು ‘ಭಾರತ್’ ಎಂದು ಕರೆಯಲು ನಿರ್ಧರಿಸಿದರೆ ಆಡಳಿತ ಪಕ್ಷವು ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಾಯಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ದೇಶವು 140 ಕೋಟಿ ಜನರಿಗೆ ಸೇರಿದ್ದು, ಒಂದು ಪಕ್ಷಕ್ಕಲ್ಲ, ಮೈತ್ರಿಯ ಹೆಸರನ್ನು ಭಾರತ್ ಎಂದು ಬದಲಾಯಿಸಿದರೆ, ಅವರು ಭಾರತ್ ಹೆಸರನ್ನು ಬಿಜೆಪಿ ಎಂದು ಬದಲಾಯಿಸುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ, ಇಂಡಿಯಾ ಪದಗಳ ಬಗ್ಗೆ ಏನು ಹೇಳಿದ್ದರು. ಅವರ ಅಭಿಪ್ರಾಯ ಏನಾಗಿತ್ತು ಎಂಬ ಕುತೂಹಲ ಸಹಜ. ಅಂಬೇಡ್ಕರ್ ಸೆಪ್ಟೆಂಬರ್ 17, 1949 ರಂದು, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ 1 ನೇ ವಿಧಿಯ ಅಂತಿಮ ಆವೃತ್ತಿಯನ್ನು ಮಂಡಿಸಿದ್ದರು. ಈ ವೇಳೆ ‘ಭಾರತ’ ಮತ್ತು ಇಂಡಿಯಾ ಸೇರಿದಂತೆ ಎರಡೂ ಪದಗಳನ್ನು ಆಗ ಬಳಸಲಾಗಿತ್ತು. ಯಾವ ಹೆಸರನ್ನು ಸಂವಿಧನಾದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಚರ್ಚೆ ಕುರಿತು ಸ್ಪಷ್ಟನೆ ನೀಡಿದ್ದ ಅಂಬೇಡ್ಕರ್ ಸಂವಿಧಾನ ಸಭೆಯ ಸದಸ್ಯರು ‘ಭಾರತ್’ ಅನ್ನು ವಿರೋಧಿಸಿಲ್ಲ ಎಂದು ತಿಳಿಸಿದ್ದರು.