ಹೊಸದಿಲ್ಲಿ: ವರ್ಷಾಂತ್ಯದ ವೇಳೆಗೆ ದೇಶದಾದ್ಯಂತ ಹೆದ್ದಾರಿಗಳನ್ನು ಗುಂಡಿ ಮುಕ್ತ ಮಾಡಲು ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಸುರಕ್ಷಾತಾ ಲೆಕ್ಕ ಪರಿಶೋಧನೆಯನ್ನೂ ನಡೆಸುತ್ತಿದೆ. ಅದೇ ರೀತಿ ರಸ್ತೆಗಳ ನಿರ್ಮಾಣದಲ್ಲಿ ಪುರಸಭೆಯ ತ್ಯಾಜ್ಯವನ್ನು ಬಳಸುವ ಬಗ್ಗೆ ನೀತಿಯನ್ನ್ ಅಂತಿಮಗೊಳಿಸುವ ಪ್ರಕ್ರಿಯೇಯಲ್ಲಿ ಸರ್ಕಾರವಿದೆ. ಈನೀತಿಯು 2070ರ ವೇಳೆಗೆ ಪ್ರಧಾನಿಯವರ ಶೂನ್ಯ ತ್ಯಾಜ್ಯದ ಗುರಿ ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಗುಂಡಿಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ನೀತಿಯನ್ನು ರೂಪಿಸುತ್ತಿದೆ. ಯೋಜನೆಯನ್ನು ಯಶಸ್ವಿಗೊಳಿಸಲು ಯುವ ಎಂಜಿನಿಯರ್ಗಳನ್ನು ನಿಯೋಜಿಸಲಾಗುವುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 1,46,000 ಕಿಲೋಮೀಟರ್ ಉದ್ದದ ಸಂಪೂರ್ಣ ರಾಷ್ಟ್ರೀಯ ಹೆದ್ದಾರಿಗಳ ಮ್ಯಾಪಿಂಗ್ ಅನ್ನು ಮಾಡಿದೆ ಮತ್ತು ಈ ವರ್ಷದ ಡಿಸೆಂಬರ್ ವೇಳೆಗೆ ಗುಂಡಿಗಳನ್ನು ನಿವಾರಿಸಲು, ಕಾರ್ಯಕ್ಷಮತೆ ಆಧಾರಿತ ನಿರ್ವಹಣೆ ಮತ್ತು ಅಲ್ಪಾವಧಿಯ ನಿರ್ವಹಣಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.