ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ದೆಹಲಿ ಆನಂದ್ ವಿಹಾರ್ ರೈಲ್ವೆ ಟರ್ಮಿನಲ್ ನಿಲ್ದಾಣದಲ್ಲಿ ಹಮಾಲಿಗಳೊಂದಿಗೆ ಕೆಲಸ ಮಾಡಿ, ಅವರ ಸುಖ ಕಷ್ಟ ವಿಚಾರಿಸಿದ್ದರು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಕೀರ್ತಿನಗರದಲ್ಲಿರುವ ಪೀಠೋಪಕರಣ ಮಾರುಕಟ್ಟೆಯಲ್ಲಿ ಬಡಗಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿನ ಪೋಸ್ಟ್ ಮಾಡಿರುವ ಅವರು “ಇಂದು ನಾನು ದೆಹಲಿಯ ಕೀರ್ತಿನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಯ ಬಡಗಿ ಸಹೋದರರನ್ನು ಭೇಟಿ ಮಾಡಿದೆ.
ಅವರು ಶ್ರಮಜೀವಿಗಳಲ್ಲದೆ ಅದ್ಭುತ ಕಲಾವಿದರು ಎಂದು ಬರೆದು ಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ಮಾರುಕಟ್ಟೆಗೆ ಭೇಟಿ ನೀಡಿದ ಫೋಟೋಗಳನ್ನು ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿವಿ ಅವರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ.
ಶ್ರೀನಿವಾಸ್ ಅವರು ತಮ್ಮ ಪೋಸ್ಟ್ನಲ್ಲಿ ಹೀಗೆ ಹೇಳಿದ್ದಾರೆ “ನಮ್ಮ ಮಾಸ್ ಲೀಡರ್ ರಾಹುಲ್ ಗಾಂಧಿ ದೆಹಲಿಯ ಕೀರ್ತಿನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಭೇಟಿ ನೀಡಿ ಶ್ರಮಿಕ ಸಹೋದರರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ. ಇದೇ ರೀತಿ ಭಾರತ ಜೋಡೋ ಪ್ರಯಾಣ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 21 ರಂದು ರಾಹುಲ್ ಗಾಂಧಿ ಅವರು ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿ ಹಮಾಲಿಗಳೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೆ ತಲೆ ಮೇಲೆ ವಸ್ತುಗಳನ್ನು ಹೊತ್ತು ನಡೆದು ಸುತ್ತ ನೆರೆದಿದ್ದ ಜನರನ್ನು ಅಚ್ಚರಿಗೊಳಿಸಿದ್ದರು.