ನವದೆಹಲಿ: ಲಂಡನ್ನಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊರದೇಶದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿಲ್ಲ. ಸದನದೊಳಗೆ ಅವಕಾಶ ನೀಡಿದರೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಯುಕೆ ಭಾಷಣಕ್ಕಾಗಿ ಕ್ಷಮೆಯಾಚಿಸುತ್ತೀರಾ ಎಂದು ಸಂಸತ್ತಿನಲ್ಲಿ ಸುದ್ದಿಗಾರರು ಕೇಳಿದಾಗ ಗಾಂಧಿ ನಸುನಗುತ್ತಾ ಪ್ರತಿಕ್ರಿಯೆ ನೀಡಿದರು. ನಾನು ಭಾರತ ವಿರೋಧಿಯಾಗಿ ಏನನ್ನೂ ಮಾತನಾಡಿಲ್ಲ ಎಂದರು. ಮಾರ್ಚ್ 13 ರಂದು ಆರಂಭವಾದ ಬಜೆಟ್ ಅಧಿವೇಶಕ್ಕಾಗಿ ಮೊದಲ ಬಾರಿಗೆ ರಾಹುಲ್ ಸಂಸತ್ತಿಗೆ ಆಗಮಿಸಿದರು. ಇದಕ್ಕೂ ಮುನ್ನ ಉಭಯ ಸದನಗಳನ್ನು ಗುರುವಾರ
ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು.
ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಅದಾನಿ ಪ್ರಕರಣದಲ್ಲಿ ಜೆಪಿಸಿ ತನಿಖೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಭಿತ್ತಿಪತ್ರಗಳನ್ನು ಹಿಡಿದು ಸದನದ ಬಾವಿಗೆ ನುಗ್ಗಿದರು. ಕಳೆದ ವಾರ ಲಂಡನ್ನಲ್ಲಿಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಭಾರತದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಪಾಯವಿದೆ ಎಂದು ಹೇಳಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಕೋರಿ ಬಿಜೆಪಿಗರು ಘೋಷಣೆ ಕೂಗಿದ್ದರು. ಗೊಂದಲದ ದೃಶ್ಯಗಳ ನಡುವೆ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.