ನವದೆಹಲಿ: ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನಿಟ್ಟು ಪ್ರತಿಭಟಿಸುತ್ತಿರುವ ರೈತರ ಎದುರು ದೇಶಾದ್ಯಂತ ಎಂಎಸ್ಪಿ ಖಾತರಿ ಕಾನೂನು ನೀಡುವ ಪ್ರಸ್ತಾಪ ಮಾಡಿದ್ದು, ಕೃಷಿಕರು ಅದಕ್ಕಿ ಒಪ್ಪಿಗೆ ಸೂಚಿಸಿದರೆ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCI) ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಕೇಂದ್ರ ಸರ್ಕಾರದ ನಿಯೋಗ ತಿಸಿದೆ.
ಕೃಷಿ ಸಚಿವ ಅರ್ಜುನ್ ಮುಂಡಾ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಹೆಸರುಕಾಳು, ಉದ್ದಿನಬೇಳೆ, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳಿಗೆ MSP ಕೊಡುವ ಪ್ರಸ್ತಾವವನ್ನು ಮಾಡಲಾಯಿತು. ರೈತರ ಒಪ್ಪಿಗೆಯಿದ್ದಲ್ಲಿ, ಮೊದಲ ಹಂತದ ಯೋಜನೆ ಜಾರಿ ಮಾಡಿ, ಮುಂದಿನ ಹಂತದಲ್ಲಿ ಬೇರೆ ಬೆಳೆಗಳಿಗೂ ವಿಸ್ತರಿಸುವ ಬಗ್ಗೆ ಯೋಚನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಉಳಿದ ಬೇಡಿಕೆಗಳಾದ ರೈತರ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ, WTO ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಯೋಜನೆ, ಬೆಳೆ ವಿಮೆ ಪದ್ಧತಿ, ಕಳೆದ ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರದ ನೆರವುಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕೆಂದ್ರ ಸರ್ಕಾರದ ಪರವಾಗಿ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ.
ಸರ್ಕಾರದ ಪ್ರಸ್ತಾವನೆಯ ಬಗ್ಗೆ ಇನ್ನೂರಕ್ಕೂ ಹೆಚ್ಚು ಸಂಘಟನೆಗಳ ಮುಖಂಡರ ಜೊತೆ ಹಾಗೂ ವಿಷಯ ಪರಿಣಿತರ ಜೊತೆ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲ ಹೇಳಿದ್ದಾರೆ. ಸಭೆಯಲ್ಲಿ ಕರ್ನಾಟಕ ರಾಜ್ಯದ ರೈತ ಮುಖಂಡರಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ಭಾಗಿಯಾಗಿದ್ದರು.