ಧಾರವಾಡ: ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಕುಡಿಯುವ ನೀರು, ಜನ-ಜಾನುವಾರುಗಳಿಗೆ ಮೇವು ಮತ್ತು ಜನರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಲು ಜಿಲ್ಲಾಡಳಿತ ಅಗತ್ಯವಾದ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಸ್ಥಾಪಿಸಿರುವ ಸರಕಾರಿ ಗೋಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, 20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,33,461 ದೊಡ್ಡ ಮತ್ತು 1,53,938 ಸಣ್ಣ ಪ್ರಾಣಿಗಳು ಸೇರಿ ಒಟ್ಟು 3,87,399 ಪ್ರಾಣಿಗಳಿವೆ. ಸಣ್ಣ ಮತ್ತು ದೊಡ್ಡ ಪ್ರಾಣಿಗಳಿಗೆ ಅನುಗುಣವಾಗಿ ಅಂದಾಜು ಪ್ರತಿದಿನ ಆರು ಕೆ.ಜಿಯಂತೆ ಪ್ರತಿ ವಾರಕ್ಕೆ ಸರಾಸರಿ 10.261 ಟನ್ ಮೇವು ಬೇಕಾಗುತ್ತದೆ. ಕೆಲವು ರೈತರು ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಸ್ವಂತ ಮೇವು ಸಂಗ್ರಹ ಹೊಂದಿದ್ದಾರೆ. ಆದರೂ ಜಿಲ್ಲಾಡಳಿತದಿಂದ ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಮುಂದಿನ 12 ರಿಂದ 13 ವಾರಕ್ಕೆ ಬೇಕಾಗುವಷ್ಟು ಸುಮಾರು 1,38,492 ಟನ್ ಮೇವು ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತದೆ. ಶೀಘ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಶೇರೆವಾಡ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಫೆಬ್ರವರಿ ತಿಂಗಳ ಅಂತ್ಯದೊಳಗೆ ರೈತರ ಬೇಡಿಕೆಗೆ ಅನುಗುಣವಾಗಿ ಪ್ರತಿ ತಾಲೂಕಿಗೆ ಒಂದು ಮೇವು ಬ್ಯಾಂಕ್ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಮಾದನಭಾವಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಸರಕಾರಿ ಗೋಶಾಲೆ ಆರಂಭಿಸಲಾಗಿದೆ. ಈ ಗೋಶಾಲೆಯಲ್ಲಿ ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆಕಳು, ಕರು ಮತ್ತು 17ಕ್ಕೂ ಹೆಚ್ಚು ಎಮ್ಮೆ ಹಾಗೂ ಕರುಗಳಿವೆ. ರೈತರು ತಮಗೆ ಪಶುಪಾಲನೆಗೆ ತೊಂದರೆ, ಅನಾನುಕೂಲವಿದ್ದಲ್ಲಿ ತಮ್ಮ ಹಸುಗಳನ್ನು ಈ ಗೋಶಾಲೆಗೆ ನೀಡಹುದು.
ಸುಮಾರು 1 ಸಾವಿರ ದನಗಳಿರುವ 10 ಖಾಸಗಿ ಗೋಶಾಲೆಗಳು ಜಿಲ್ಲೆಯಲ್ಲಿವೆ. ಇವುಗಳಿಗೆ ಪುಣ್ಯಕೋಟಿ ಹಾಗೂ ಪಿಂಜಾರಪೋಳ ಯೋಜನೆಗಳಡಿ ಸರಕಾರದ ಸಹಾಯಧನ ಹಾಗೂ ದಾನಿಗಳ ನೇರವು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಜೂನ್ ತಿಂಗಳವರೆಗೂ ಅಗತ್ಯವಿರುವಷ್ಟು ಮೇವು ದಾಸ್ತಾನು ಹೊಂದಲಾಗಿದೆ. ಹಿಂಗಾರಿನ ಮೇವು ಸಹ ರೈತರಿಗೆ ಸೀಗುತ್ತದೆ. ಮೇವು ಪೂರೈಕೆಗಾಗಿ ಟೆಂಡರ್ ಕರೆದು ಪೂರೈಕೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮತ್ತು ಮೇವು ಬೇಡಿಕೆ ಬರಬಹುದಾದ ಹೋಬಳಿಗಳನ್ನು ಗುರುತಿಸಲಾಗಿದ್ದು, ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್ ತೆರಯಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ನೀರಾವರಿ ಅನುಕೂಲವಿರುವ ಮತ್ತು ಮೇವು ಬೆಳೆಯಲು ಆಸಕ್ತಿ ಇರುವ ರೈತರಿಗೆ ಇಲ್ಲಿವರೆಗೆ ವಿವಿಧ ಬೆಳೆಗಳ 39 ಸಾವಿರ ಬೀಜದ ಪಾಕೆಟ್ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ರವಿ ಸಾಲಿಗೌಡರ, ಸಹಾಯಕ ನಿರ್ದೇಶಕ ಡಾ.ಪ್ರಕಾಶ ಬೆನ್ನೂರ, ಡಾ.ಸುರೇಶ ಅರಕೇರಿ ಹಾಗೂ ಗೋಶಾಲೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.