ದೆಹಲಿ: ಬುಧವಾರ ಸಂಜೆ ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಮಧ್ಯಂತರ ಕೇಂದ್ರ ಬಜೆಟ್ 2024 ರ ತಯಾರಿ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸುವ ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ ನಡೆಯಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೊಡ್ಡಗಾತ್ರದ ಕಬ್ಬಿಣದ ಬಾಣಲೆಯಲ್ಲಿದ್ದ ಹಲ್ವಾವನ್ನು ಸಚಿವಾಲಯದ ಅಧಿಕಾರಿಗಳಿಗೆ ಹಂಚಿದ್ದಾರೆ. ಸಚಿವೆ ಅಧಿಕಾರಿಗಳಿಗೆ ಹಲ್ವಾ ಬಡಿಸುವ ಮೊದಲು ಕೈಯಾಡಿಸಿದ್ದಾರೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಾಗವತ್ ಕರದ್ ಅವರು ಕೂಡಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಬಜೆಟ್ ತಯಾರಿಕೆಯ ಲಾಕ್ ಇನ್ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಪ್ರತಿ ವರ್ಷ ನಡೆಸಲಾಗುತ್ತದೆ.
ಆಚರಣೆಯ ಪ್ರಕಾರ, ಬಜೆಟ್ ತಯಾರಿಕೆಯ ಪ್ರಕ್ರಿಯೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಎಲ್ಲರಿಗೂ ಭಾರತೀಯ ಸಿಹಿಭಕ್ಷ್ಯವನ್ನು ನೀಡಲಾಗುತ್ತದೆ. ಸಮಾರಂಭದ ನಂತರ, ಹಣಕಾಸು ಸಚಿವರು ಅಂತಿಮವಾಗಿ ಬಜೆಟ್ ಮಂಡಿಸುವವರೆಗೆ ಅಧಿಕಾರಿಗಳು ಹಣಕಾಸು ಸಚಿವಾಲಯದಲ್ಲಿ ಇರಬೇಕಾಗುತ್ತದೆ.
ಇನ್ನುಉ ಈ ಆಚರಣೆಯು ದಶಕಗಳಿಂದನಡೆದು ಬರುತ್ತಿದ್ದು ವಿಶೇಷವಾದದ್ದನ್ನು ಪ್ರಾರಂಭಿಸುವ ಮೊದಲು ಸಿಹಿ ತಿನ್ನುವ ಭಾರತೀಯ ಸಂಪ್ರದಾಯದಿಂದ ಪ್ರೇರಿತವಾಗಿದೆ. ಆಯವ್ಯಯವನ್ನು ಸಿದ್ಧಪಡಿಸುವಲ್ಲಿ ತೊಡಗಿಸಿಕೊಂಡಿರುವವರೆಲ್ಲರ ಶ್ರಮವನ್ನು ಅಂಗೀಕರಿಸುವ ಸೂಚಕವೂ ಆಗಿದೆ.
ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ.