ನವದೆಹಲಿ : ಕೇಂದ್ರದ ಭತ್ತ ಖರೀದಿ ನೀತಿ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ರಾಜ್ಯದಿಂದ ಭತ್ತ ಖರೀದಿಸುವ ಬಗ್ಗೆ 24 ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಸೋಮವಾರ ಮೋದಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ತೆಲಂಗಾಣ ಸಿಎಂ ಎಚ್ಚರಿತೆ ನೀಡಿದ್ದಾರೆ. ಇಲ್ಲಿನ ತೆಲಂಗಾಣ ಭವನದಲ್ಲಿ ಟಿಆರ್ಎಸ್ ಪಕ್ಷದ ಮುಖಂಡರೊಂದಿಗೆ ಧರಣಿ ನಡೆಸಿದ ರಾವ್, ‘ನಮ್ಮ ರೈತರ ಭಾವನೆಗಳೊಂದಿಗೆ ಆಟವಾಡಬೇಡಿ, ಸರ್ಕಾರವನ್ನು ಬೀಳಿಸುವ ಶಕ್ತಿ ಅವರಿಗಿದೆ. ರೈತರು ಭಿಕ್ಷುಕರಲ್ಲ, ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಪಡೆಯುವ ಹಕ್ಕು ಅವರಿಗಿದೆ’ ಎಂದು ಹೇಳಿದರು.
24 ಗಂಟೆಯೊಳಗೆ ಭತ್ತ ಸಂಗ್ರಹಣೆ ಕುರಿತ ರಾಜ್ಯದ ಬೇಡಿಕೆಗೆ ಸ್ಪಂದಿಸುವಂತೆ ನಾನು ಮೋದಿಜಿ ಮತ್ತು ಪಿಯೂಷ್ ಗೋಯಲ್ ಜಿ ಅವರಿಗೆ ಕೈಮುಗಿದು ಒತ್ತಾಯಿಸುತ್ತೇನೆ. 24 ಗಂಟೆಗಳ ನಂತರವೂ ಯಾವುದೇ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧಾರರೆ ತೆಗೆದುಕೊಳ್ಳುತ್ತೇವೆ ಎಂದು ‘ರಾವ್ ಹೇಳಿದ್ದಾರೆ.
ಕೇಂದ್ರ ಸ್ಪಂದಿಸದಿದ್ದರೆ ದೇಶಾದ್ಯಂತ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರಾವ್ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಸಹ ಇಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ತೆಲಂಗಾಣ ಸಿಎಂ ಜೊತೆ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.