ನವದೆಹಲಿ : ತಮ್ಮ ಮನೆಮುಂದೆ ದಾಂದಲೆ ನಡೆಸಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ದೇಶದ ಅತಿ ದೊಡ್ಡ ಹಾಗೂ ಆಡಳಿತದಲ್ಲಿರುವ ಪಕ್ಷ ದೆಹಲಿಯಲ್ಲಿ ಗೂಂಡಾಗಿರಿ ಮಾಡಬಹುದೇ? ಈ ಮೂಲಕ ಬಿಜೆಪಿ ದೇಶದ ಯುವಕರಿಗೆ ಯಾವ ಸಂದೇಶವನ್ನು ಕಳುಹಿಸುತ್ತದೆ?
ದೇಶದಲ್ಲಿ ಈ ರೀತಿಯ ಪ್ರಗತಿ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿ ನಿನ್ನೆ ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸಿರುವುದಕ್ಕೆ ಅವರು ತೀಕ್ಷವಾಗಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸಂಸದ ಮತ್ತು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕೇಜ್ರಿವಾಲ್ ಅವರ ಮನೆಮುಂದೆ ಬುಧವಾರ ಪ್ರತಿಭಟನೆ ಮಾಡಿ, ದಾಂದಲೆ ನಡೆಸಿದ್ದರು. ನಿವಾಸದ ಮುಂದೆ ಇದ್ದ ಬ್ಯಾರಿಯರ್ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದರು. ಜತೆಗೆ ಮುಖ್ಯಮಂತ್ರಿಗಳ ಮನೆಯ ಕಬ್ಬಿಣದ ಗೇಟಿಗೆ ಕೇಸರಿ ಬಣ್ಣ ಬಳಿದಿದ್ದರು.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಕ್ಕಿಂತ, ಅದನ್ನು ಯುಟ್ಯೂಬ್ಗೆ ಹಾಕಿಬಿಟ್ಟರೆ ಎಲ್ಲಾ ಜನ ಉಚಿತವಾಗಿ ನೋಡುತ್ತಾರೆ’ ಎಂದು ಕೇಜ್ರಿವಾಲ್ ತಿಳಿಸಿದ್ದರು. ಈ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.