ಇಂಫಾಲ್ : ಮಣಿಪುರದಲ್ಲಿ ಕಾಂಗ್ರೆಸ್ ಹಿರಿಯ ನಾಯಕರೂ ಮಾಜಿ ರಾಜ್ಯ ಕಾಂಗ್ರೆಸ್ ಅದ್ಯಕ್ಷರೂ ಆಗಿದ್ದ ಗೋವಿಂದದಾಸ್ ಕೊಂತೌಜಮ್ ಅವರು ಮುಖ್ಯ ಮಂತ್ರಿ ಎನ್. ಬಿರೆನ್ ಸಿಂಗ್ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಬಾಲುನಿ, ಪ್ರಮುಖ ವ್ಯಕ್ತಿಯೋರ್ವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆಗಸ್ಟ್ ಒಂದು ಭಾನುವಾರ ಮಧ್ಯಾಹ್ನ ನವದೆಹಲಿಯ 6ಎ ಡಿಡಿಯು ಮಾರ್ಗದ ಬಿಜೆಪಿ ಮುಖ್ಯ ಕಾರ್ಯಾಲಯದಲ್ಲಿ ಪ್ರಮುಖ ವ್ಯಕ್ತಿಯೊಬ್ಬರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದ್ದರು.
ಕೊಂತೌಜಮ್ ಮಣಿಪುರ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವೈಯುಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಳೆದ ಬುಧವಾರ ಶಾಸಕ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದರು. ಕೊಂತೌಜಮ್ ಬಿಶನ್ಪುರ್ ಕ್ಷೇತ್ರದಿಂದ ಬರೋಬ್ಬರಿ 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥನೇ ಪಕ್ಷ ತೊರೆದಿರುವುದು ಕಾಂಗ್ರೆಸ್ ಗೆ ತೀವ್ರ ಹಿನ್ನಡೆ ಆಗಲಿದೆ ಎನ್ನಲಾಗಿದೆ.