ನವದೆಹಲಿ(ಡಿ. 10) : ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಅಂತ್ಯಸಂಸ್ಕಾರವನ್ನು ಸಕಲ ಸೇನಾ ಗೌರವದೊಂದಿಗೆ ಶುಕ್ರವಾರ ಸಂಜೆ ನೆರವೇರಿಸಲಾಗುತ್ತದೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾವತ್ ಮತ್ತು ಪತ್ನಿ ಮಧುಲಿಕಾ ಅವರ ಕಳೇಬರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಧ್ಯಾಹ್ನ 2ರ ತನಕ ಬಿಪಿನ್ ರಾವತ್ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ದೇಶದ ಉನ್ನತ ಸೇನಾ ಪಡೆಗಳ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾರತದ ಮೊದಲ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಂಸದ ರಾಜೀವ್ ಚಂದ್ರಶೇಖರ್, ಯೋಗಿ ಆದಿತ್ಯನಾಥ್, ಸದಾನಂದಗೌಡ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಹರೀಶ್ ಸಿಂಗ್ ರಾವತ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಡಿಎಂಕೆ ನಾಯಕರಾದ ಎ ರಾಜಾ ಮತ್ತು ಕನಿಮೋಳಿ ಸೇರಿದಂತೆ ಹಲವರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅಂತಿಮ ದರ್ಶನ ಪಡೆಯಲು ಅವರ ನಿವಾಸದ ಹೊರಗಡೆ ಜನರ ದಂಡೇ ಜಮಾವಣೆಗೊಂಡಿದ್ದು ದರ್ಶನ ನೀಡುವಂತೆ ಒತ್ತಾಯಿಸಿದ್ದಾರೆ. ರಾಷ್ಟ್ರ ರಕ್ಷಕನ ಅಂತಿಮ ದರ್ಶಮ ಪಡೆಯಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸಂಜೆ ಹೊತ್ತಿಗೆ ರಾವತ್ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಬ್ರಾರ್ ಸ್ವ್ಕೇರ್ (brar square) ರುದ್ರ ಭೂಮಿಗೆ ತೆಗದುಕೊಂಡು ಹೋಗಲಾಗುತ್ತದೆ. ರಾವತ್ ನಿವಾಸದಿಂದ 9ಕಿ ಮೀ ಅಂತಿಮ ಯಾತ್ರೆ ನಡೆಯಲಿದೆ. ಸಕಲ ಸೇನಾ ಗೌರವದೊಂದಿಗೆ ಬ್ರಾರ್ ಸ್ವ್ಕೇರ್ ರುದ್ರಭೂಮಿಯಲ್ಲಿ ಬಿಪಿನ್ ರಾವತ್ ಅಂತಿಮ ಸಂಸ್ಕಾರ ನಡೆಯಲಿದೆ.