ನವದೆಹಲಿ: ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ದೆಹಲಿಯ ಕಾಮರಾಜ್ ಮಾರ್ಗದಲ್ಲಿರುವ ಅವರ ನಿವಾಸಕ್ಕೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.ನವದೆಹಲಿಯಲ್ಲಿ ಸಂಪೂರ್ಣ ಸೇನಾ ಗೌರವದೊಂದಿಗೆ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ರಾಜ್ನಾಥ್ ಸಿಂಗ್ ಅವರು ತಿಳಿಸಿದ್ದು, ಇಂದು ಸಂಜೆ ಮೃತರ ಪಾರ್ಥಿವ ಶರೀರ ಅಲ್ಲಿಗೆ ತಲುಪಬಹುದು ಎನ್ನಲಾಗಿದೆ.
ಬಿಪಿನ್ ರಾವತ್ ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳಾದ ಕೃತಿಕಾ ರಾವತ್ ಹಾಗೂ ತರಿಣಿ ರಾವತ್ ಅವರನ್ನು ಅಗಲಿದ್ದಾರೆ.
ನಿನ್ನೆ ಸಂಜೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹಾಗೂ ಜನರಲ್ ಮುಕುಂದ್ ನರವಾಣೆ ರಾವತ್ ಅವರ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಸಾಂತ್ವಾನ ಹೇಳಿದ್ದರು.
ತಮಿಳುನಾಡಿನ ನೀಲಗೀರಿ ಜಿಲ್ಲೆಯ ಕೊನೂರು ಬಳಿ ಗುರುವಾರ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಮತ್ತು 11 ಜನ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.ಮನೆಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಆಯ್ದ ಕೆಲವರನ್ನು ಮಾತ್ರ ಮನೆ ಒಳಗಡೆ ಬಿಡಲಾಗುತ್ತಿದೆ.