ನವದೆಹಲಿ, ಡಿ 11: ವರ್ಷಗಳ ಪ್ರತಿಭಟನೆ ಅಂತ್ಯಗೊಳಿಸಿ ಊರಿಗೆ ಹಿಂದುರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದಾರೆ.
ದೆಹಲಿಯ ಟಿಕ್ರಿ ಗಡಿ ಬಳಿಯ ಪ್ರತಿಭಟನಾ ಸ್ಥಳದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಟ್ರಕ್ ವೊಂದು ಟ್ರ್ಯಾಕ್ಟರ್ ಟ್ರೈಲರ್ ಡಿಕ್ಕಿ ಹೊಡೆದ ಪರಿಣಾಮ ಪಂಜಾಬಿನ ಇಬ್ಬರು ರೈತರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಹಿಸಾರ್ ನ ದಾಂದೂರ್ ಗ್ರಾಮದಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ರೈತ ತೀವ್ರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಪಘಾತ ಸಂಭವಿಸಿದಾಗ ಟ್ರ್ಯಾಕ್ಟರ್ ಟ್ರೈಲರ್ ನಲ್ಲಿ ಐವರು ರೈತರು ಇದಿದ್ದಾಗಿ ಹಿಸಾರ್ ಪೊಲೀಸ್ ಇನ್ಸ್ ಪೆಕ್ಟರ್ ಕಪ್ತಾನ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಐವರು ರೈತರ ಪೈಕಿ ಓರ್ವ ರೈತ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ರೈತ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿರುವುದಾಗಿ ಇನ್ಸ್ ಪೆಕ್ಟರ್ ಹೇಳಿದ್ದಾರೆ.
ಈ ರೈತರು ಪಂಜಾಬಿನ ಮುಕ್ತಾಸರ್ ಜಿಲ್ಲೆಯವರಾಗಿದ್ದು, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ಪ್ರತಿಭಟನೆ ನಡೆಸಿ, ಕೊನೆಗೆ ವಿವಾದಾತ್ಮಾಕ ಕಾನೂನು ರದ್ದಾಗಿ ಮನೆಗೆ ಸಂತೋಷದಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ತಿದ್ದುಪಡಿ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ಮತ್ತು ತಮ್ಮ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದು ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಿಂದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಸೇರಿದಂತೆ ಹಲವು ಸಂಘಟನೆಗಳು ವಿಜಯೋತ್ಸವ ಆಚರಿಸುತ್ತಾ ಸ್ಥಳದಿಂದ ಹಿಂದುರಿಗಿದ್ದಾರೆ.
ಮೊನ್ನೆ ರೈತ ಸಂಘಟನೆಗಳು ನೀಡಿದ್ದ ವಾಗ್ಧಾನದಂತೆ ಇಂದು ದೆಹಲಿ ಗಡಿಯನ್ನು ಖಾಲಿ ಮಾಡುವುದಾಗಿ ಮತ್ತು ಜನವರಿ 15 ರಂದು ಮತ್ತೊಂದು ಸಭೆ ನಡೆಸುವುದಾಗಿ ರೈತರು ಹೇಳಿದ್ದಾರೆ. ಕೇಂದ್ರದ ಪರಿಷ್ಕೃತ ಪ್ರಸ್ತಾವನೆ ಬಂದ ಕೂಡಲೇ, ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸುವುದಾಗಿ ತಿಳಿಸಿದ್ದವು.
ರೈತರು ವಿಜಯೋತ್ಸಾಹ: ತಮ್ಮ ಒಂದು ವರ್ಷದ ಪ್ರತಿಭಟನೆ ಯಶಸ್ವಿಯಾಗಿದ್ದು ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು, ಪ್ರತಿನಿಧಿಗಳು ಟಿಕ್ರಿ ಗಡಿಭಾಗದಲ್ಲಿ ನೃತ್ಯ ಮಾಡುತ್ತಾ ವಿಜಯೋತ್ಸಾಹ ನಡೆಸಿದರು. ಅಲ್ಲಿ ಹಾಕಿದ್ದ ಟೆಂಟ್-ಡೇರೆಗಳನ್ನು ತೆಗೆದರು. ಗಾಜಿಪುರ ಗಡಿಯಲ್ಲಿದ್ದ ಟೆಂಟ್ ಗಳನ್ನು ತೆಗೆದು ತಮ್ಮೂರಿಗೆ ಹಿಂತಿರುಗಿದ್ದಾರೆ.
ಈ ಸಂದರ್ಭದಲ್ಲಿ ಗಾಜಿಪುರ ಗಡಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟೀಕಾಯತ್, ಇಂದು ಬೆಳಗ್ಗೆ ರೈತರ ದೊಡ್ಡ ಗುಂಪು ಪ್ರತಿಭಟನಾ ಸ್ಥಳ ತೊರೆದಿದೆ.
ಇಂದಿನ ಸಭೆಯಲ್ಲಿ ಸಭೆ ನಡೆಸಿ ಪ್ರಾರ್ಥನೆ, ಭಜನೆ, ನೃತ್ಯ ಮಾಡಿ ಸಂತೋಷದಿಂದ ತಮ್ಮೂರಿಗೆ ತೆರಳುತ್ತಾರೆ.ಈಗಾಗಲೇ ಹಲವರು ಗಡಿ ತೊರೆದಿದ್ದಾರೆ. ಎಲ್ಲರೂ ಸಂಪೂರ್ಣವಾಗಿ ತೊರೆಯುವ ಪ್ರಕ್ರಿಯೆ ಮುಗಿಯಲು ನಾಲ್ಕೈದು ದಿನಗಳು ಬೇಕಾಗಬಹುದು, ನಾನು ಡಿಸೆಂಬರ್ 15ಕ್ಕೆ ತೆರಳುತ್ತೇನೆ ಎಂದರು.