ಹೊಸದಿಲ್ಲಿ: ಜನರಲ್ ಬಿಪಿನ್ ರಾವತ್ ಅವರು ಅಸಾಧಾರಣ ಸೇನಾ ನಾಯಕರಾಗಿದ್ದರು. ಅವರ ಮರಣ ತುಂಬಲಾರದ ಶೂನ್ಯವನ್ನು ಸೃಷ್ಟಿಸಿದೆ ಎಂದು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಅವರು ಇಂದು ಡೆಹ್ರಾಡೂನ್ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪರೇಡ್ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದರು.
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದ ಆಘಾತದಿಂದ ದೇಶವು ಇನ್ನೂ ಹೊರಬರಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ, ನಾವು ಇಂದು ಇಲ್ಲಿ ಸಭೆ ಸೇರಿದ್ದೇವೆ. ಉತ್ತರಾಖಂಡ ಅವರ ಮನೆಯಾಗಿತ್ತು, ಅವರು ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಐಎಂಎನಲ್ಲಿ ಅವರ ಅಸಾಧಾರಣ ಕೌಶಲಗಳಿಗಾಗಿ ಅವರಿಗೆ ‘ಸ್ವೋರ್ಡ್ ಆಫ್ ಆನರ್’ ನೀಡಲಾಗಿತ್ತು. ಆದರೆ ದುರಂತ ನಡೆಯದೇ ಇದ್ದಿದ್ದರೆ, ಅವರು ಇಂದು ಇಲ್ಲಿ ನಮ್ಮ ನಡುವೆ ಇರುತ್ತಿದ್ದರು. ಪಾಸಿಂಗ್ ಔಟ್ ಪರೇಡ್ನ ಕೆಡೆಟ್ಗಳನ್ನು ಸಂತೋಷ ಮತ್ತು ಹೆಮ್ಮೆಯಿಂದ ನೋಡುತ್ತಿದ್ದರು ಎಂದು ರಾಷ್ಟ್ರಪತಿ ಹೇಳಿದರು.
ಜನರಲ್ ರಾವತ್ ಅವರು ಐಎಂಎ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಅವರಿಗಿಂತ ಮೊದಲು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಮತ್ತು ಇತರ ಅನೇಕ ಅಸಾಧಾರಣ ಯೋಧರು ಮತ್ತು ತಂತ್ರಜ್ಞರು ಯುವ ಕೆಡೆಟ್ಗಳಾಗಿ ಮತ್ತು ಸಂಭಾವ್ಯ ನಾಯಕರಾಗಿ ತಮ್ಮ ಪ್ರಯಾಣವನ್ನು ಇಲ್ಲಿಂದ ಪ್ರಾರಂಭಿಸಿದ್ದಾರೆ. ಅವರಲ್ಲಿ ಕೆಲವರು ನಮ್ಮ ದೇಶದ ಸುರಕ್ಷತೆ ಮತ್ತು ಗೌರವಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದ ರಾಷ್ಟ್ರಪತಿ ಕೋವಿಂದ್ ಅವರು, ಶೌರ್ಯ ಮತ್ತು ಬುದ್ಧಿವಂತಿಕೆಯಿಂದ ನಿರೂಪಿಸಲ್ಪಟ್ಟ ಜೀವನದ ಪಯಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಿರುವ ಕೆಡೆಟ್ಗಳು ಈ ಅಕಾಡೆಮಿಯ ಶ್ರೀಮಂತ ಪರಂಪರೆಯನ್ನು ಮುಂದುವರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೈನಿಕರ ಮತ್ತು ಸೇನಾ ನಾಯಕರ ಸೇವೆ ಮತ್ತು ಸಮರ್ಪಣೆಯು ಶಾಂತಿಯುತ, ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ಭಾರತದ ಶಕ್ತಿಯನ್ನು ಹೆಚ್ಚಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಭವಿಷ್ಯದ ಪೀಳಿಗೆಗೆ ಸೈನಿಕ ನಡವಳಿಕೆಯ ಆದರ್ಶಪ್ರಾಯರಾಗಿರುವ ಅಕಾಡೆಮಿಯ ಅನೇಕ ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಜನರಲ್ ಬಿಪಿನ್ ರಾವತ್ ಅವರು ಗಳಿಸಿದ ಅಪ್ರತಿಮ ಸ್ಥಾನಮಾನವನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಹೇಳಿದ ರಾಷ್ಟ್ರಪತಿ, ನಮ್ಮ ಧ್ವಜವು ಯಾವಾಗಲೂ ಎತ್ತರದಲ್ಲಿ ಹಾರುತ್ತದೆ. ಇಲ್ಲಿರುವ ಕೆಡೆಟ್ಗಳಂತಹ ವೀರರು ಅದರ ಗೌರವವನ್ನು ಕಾಪಾಡುತ್ತಾರೆ ಎಂದರು.
ಪರೇಡ್ನಲ್ಲಿ ಭಾರತದ ಮಿತ್ರ ರಾಷ್ಟ್ರಗಳಾದ ಅಫಘಾನಿಸ್ತಾನ, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ತಜಕಿಸ್ತಾನ್, ತಾಂಜಾನಿಯಾ, ತುರ್ಕ್ಮೆನಿಸ್ತಾನ್ ಮತ್ತು ವಿಯೆಟ್ನಾಂನ ಕೆಡೆಟ್ಗಳನ್ನು ನೋಡಿ ಸಂತೋಷಪಟ್ಟ ರಾಷ್ಟ್ರಪತಿ ಕೋವಿಂದ್ ಅವರು, ನಮ್ಮ ರಾಷ್ಟ್ರಗಳ ನಡುವಿನ ವಿಶೇಷ ಬಾಂಧವ್ಯವನ್ನು ನಾವು ಗೌರವಿಸುತ್ತೇವೆ. ಇಂದು ನಮ್ಮ ಮಿತ್ರ ರಾಷ್ಟ್ರಗಳ ಇಂತಹ ಉತ್ತಮ ಅಧಿಕಾರಿ ಮತ್ತು ಕೆಡೆಟ್ಗಳು ಪದವಿ ಪಡೆಯುತ್ತಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.