ನವದೆಹಲಿ(ಡಿ. 07) : ಒಮಿಕ್ರೋನ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮೂರನೇ ಡೋಸ್ ನೀಡಬೇಕೇ? ಬೇಡವೇ ಎಂಬುದರ ಕುರಿತು ಇನ್ನೂ ಗೊಂದಲ ಮುಂದುವರೆದಿದೆ. ಮೇಲ್ಕಂಡ ವರ್ಗಕ್ಕೆ ಹೆಚ್ಚುವರಿ ಡೋಸ್ ಕೋವಿಡ್ ಲಸಿಕೆ ನೀಡುವ ಸಂಬಂಧ ಘೋಷಣೆ ಮಾಡುವಂತೆ ಭಾರತೀಯ ವೈದ್ಯ ಸಂಘ ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಇದೇ ವೇಳೆ 12-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾಪಕ್ಕೆ ಚುರುಕು ನೀಡುವಂತೆ ಸೂಚಿಸಿದೆ. ಸದ್ಯ ಕೋವಿಡ್ ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಮೂರನೆ ಅಲೆಯು ವ್ಯಾಪಕವಾಗಿ ಹರಡಬಹುದು ಎಂದು ಎಚ್ಚರಿಸಿದೆ.
ಆದರೆ ಇದೇ ವಿಷಯದ ಕುರಿತು ಸಮಾಲೋಚನೆ ನಡೆಸಲು ಸೋಮವಾರ ಇಲ್ಲಿ ಸಭೆ ಸೇರಿದ್ದ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಗುಂಪಿನ ಸಭೆ(ಎನ್ಟಿಜಿಎ) ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಆದರೆ ಈ ಸಭೆಯಲ್ಲಿ ರೋಗದ ವಿರುದ್ಧ ಪ್ರತಿಕಾಯ ಸಾಮರ್ಥ್ಯವಿಲ್ಲದವರಿಗೆ ಹೆಚ್ಚುವರಿ ಡೋಸ್ ಕುರಿತು ಸದಸ್ಯರ ಮಧ್ಯೆ ಒಮ್ಮತ ಮೂಡಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಬೂಸ್ಟರ್ ಡೋಸ್ ಕುರಿತಾಗಿ ಹೆಚ್ಚಿನ ಅಧ್ಯಯನಗಳ ಅಗತ್ಯದ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಬೂಸ್ಟರ್ ಡೋಸ್ ಕುರಿತಾಗಿ ಚರ್ಚೆ ನಡೆಸಲಾಗಲಿಲ್ಲ ಎನ್ನಲಾಗಿದೆ.