ದೆಹಲಿ : ಪಂಜಾಬ್ಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದ್ದು, ಫಿರೋಜ್ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ್ಯಾಲಿ ರದ್ದಾಗಿದೆ. ಫಿರೋಜ್ಪುರ ಫ್ಲೈಓವರ್ನ ಟ್ರಾಫಿಕ್ನಲ್ಲಿ ಸಿಲುಕಿದ ಪ್ರಧಾನಿ, ಪಂಜಾಬ್ನಿಂದ ದೆಹಲಿಗೆ ವಾಪಸ್ ಆಗಿದ್ದಾರೆ.
42,750 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ಪಂಜಾಬ್ಗೆ ಆಗಮಿಸಿದ್ದರು. ಫಿರೋಜ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಮಾರ್ಗದಲ್ಲೇ ಟ್ರಾಫಿಕ್ ಉಂಟಾಗಿತ್ತು. ಅಷ್ಟೇ ಅಲ್ಲ ಪೊಲೀಸ್ ಭದ್ರತಾ ವೈಫಲ್ಯ ಎದ್ದು ಕಾಣುತ್ತಿತ್ತು. ರ್ಯಾಲಿ ತಡೆಯಲು ಉದ್ದೇಶಪೂರ್ವಕವಾಗಿಯೇ ಪಂಜಾಬ್ ಸರ್ಕಾರ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆ.ಪಿ.ನಡ್ಡಾ, ಪಂಜಾಬ್ನಲ್ಲಿ ಸಾವಿರಾರು ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ಪ್ರಧಾನಿ ಅವರ ಭೇಟಿಗೆ ಅಡ್ಡಿಪಡಿಸಿರುವುದು ದುಃಖಕರ. ಆದರೆ ಇಂತಹ ಸಂಚಿಗೆ ಹೆದರುವುದಿಲ್ಲ. ಪಂಜಾಬ್ ಅನ್ನು ಅಭಿವೃದ್ಧಿ ಮಾಡುತ್ತೇವೆ. ಇಂದು ಆಯೋಜಿಸಿದ್ದ ಬಿಜೆಪಿ ರ್ಯಾಲಿಗೆ ಜನರು ಬರದಂತೆ ತಡೆಯಲು ಪೊಲೀಸರಿಗೆ ಪಂಜಾಬ್ ಸರ್ಕಾರ ಸೂಚನೆ ನೀಡಿತ್ತು. ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರೊಂದಿಗೆ ಮಾತಿನಚಕಮಿಕ ನಡೆದಿದ್ದು, ಮಾರ್ಗದಲ್ಲಿ ಟ್ರಾಫಿಕ್ಜಾಮ್ ಉಂಟಾಗಿತ್ತು. ಇದೆಲ್ಲವೂ ಪೂರ್ವ ನಿಯೋಜಿತ ಎಂದು ಜೆ.ಪಿ. ನಡ್ಡಾ ಆಕ್ರೋಶ ಹೊರ ಹಾಕಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರ ಬಳಸಿದ ತಂತ್ರವನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ನೋವು ತರಿಸುತ್ತದೆ. ಸಮಸ್ಯೆಯನ್ನು ತಿಳಿಗೊಳಿಸುವಂತೆ ಪಂಜಾಬ್ ಸಿಎಂ ಪೊಲೀಸರಿಗೆ ಕರೆ ಮಾಡಬಹುದಿತ್ತು. ಆದರೆ, ರ್ಯಾಲಿ ತಡೆಯುವ ಉದ್ದೇಶ ಅಡಗಿದ್ದರಿಂದ ಪ್ರಯೋಜನವಾಗಲಿಲ್ಲ. ಭದ್ರತಾ ಲೋಪ ಹಿನ್ನೆಲೆ ರ್ಯಾಲಿ ರದ್ದಾಗಿದೆ ಎಂದು ಜೆ.ಪಿ.ನಡ್ಡಾ ಟ್ವೀಟ್ ಮಾಡಿದ್ದಾರೆ.
ದೆಹಲಿ-ಅಮೃತಸರ-ಕತ್ರಾ ಎಕ್ಸ್ಪ್ರೆಸ್ವೇ, ಫಿರೋಜ್ಪುರದಲ್ಲಿ ಪಿಜಿಐ ಸ್ಯಾಟಲೈಟ್ ಸೆಂಟರ್, ಕಪುರ್ತಲಾ ಮತ್ತು ಹೋಶಿಯಾರ್ಪುರದಲ್ಲಿ ಎರಡು ಹೊಸ ವೈದ್ಯಕೀಯ ಕಾಲೇಜು ಸೇರದಂತೆ ವಿವಿಧ ಯೋಜನೆಗಳಿಗೆ ಪಿಎಂ ಇಂದು ಚಾಲನೆ ನೀಡಬೇಕಿತ್ತು.
It is sad that the PM’s visit to launch development projects worth thousands of crores for Punjab was disrupted. But we will not let such cheap mentality hinder progress of Punjab and will continue the effort for the development of Punjab.
— Jagat Prakash Nadda (@JPNadda) January 5, 2022