ದೆಹಲಿ : ದೇಶದಲ್ಲೀಗ ಕೊರೋನಾ ಪ್ರಮಾಣ ತುಸು ಇಳಿಮುಖವಾಗುತ್ತಿದ್ದಂತೆ ಶಾಲೆಗಳನ್ನು ತೆರೆಯಬೇಕು ಎಂಬ ಬೇಡಿಕೆಯೂ ಹೆಚ್ಚುತ್ತಿದೆ. ಇದರ ನಡುವೆ 12 ವರ್ಷದ ದೆಹಲಿಯ ವಿದ್ಯಾರ್ಥಿಯೊಬ್ಬರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ, ಶಾಲೆಗಳನ್ನು ತೆರೆಯುವಂತೆ ಸರ್ಕಾರಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿದೆ. ಶಾಲೆ ತೆರೆಯಿರಿ ಎಂದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಮಕ್ಕಳ ಶಿಕ್ಷಣದ ಬಗ್ಗೆ ಖಂಡಿತ ಸರ್ಕಾರಗಳಿಗೆ ಸಾಕಷ್ಟು ಅರಿವಿದೆ. ಕೊರೋನಾ ತಡೆಗೆ ಲಸಿಕಾ ಅಭಿಯಾನ ನಡೆಯುತ್ತಿದೆ. ಈ ಹೊತ್ತಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ನಾವು ನ್ಯಾಯಾಂಗ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ, ಈ ಬಗ್ಗೆ ಅರ್ಜಿ ಸಲ್ಲಿಸಿದ್ದು ಪ್ರಚಾರದ ಗಿಮಿಕ್ ಎಂದು ನಾವು ಹೇಳುವುದಿಲ್ಲ. ಆದರೆ ಮಕ್ಕಳು ಇಂಥ ವಿಚಾರದಲ್ಲಿ ಭಾಗವಹಿಸಬಾರದು. ಪಾಲಕರು ತಮ್ಮ ಮಕ್ಕಳು ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು ಹೊರತು, ಸಾಂವಿಧಾನಿಕ ಹೆಜ್ಜೆ ಇಡುವಂತೆ ಮಾಡಬಾರದು ಎಂದು ಹೇಳಿದ್ದಾರೆ.
ಶಾಲೆ ಮರು ಆರಂಭ ಒಂದು ಬಹುದೊಡ್ಡ ಸಮಸ್ಯೆ ಅಲ್ಲ. ಅದರಲ್ಲೂ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡುವಂಥ ಸಮಸ್ಯೆ ಖಂಡಿತ ಅಲ್ಲ. ಇದನ್ನು ಸರ್ಕಾರಗಳಿಗೆ, ಸ್ಥಳೀಯ ಆಡಳಿತಗಳಿಗೆ ಬಿಡಬೇಕು. ಕೊರೋನಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.