ಸಹರಾನ್ಪುರ್: ಇಲ್ಲಿನ ದೆಹಲಿ-ಯಮುನೋತ್ರಿ ಹೆದ್ದಾರಿಯಲ್ಲಿ ಸೋಮವಾರ ಟ್ರಕ್ ಮತ್ತು ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.
ಅವರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸೂರಜ್ ರೈ ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಆದಿಲ್ (25), ಅವರ ಗರ್ಭಿಣಿ ಪತ್ನಿ ಅಸ್ಮಾ (24), ಮಷ್ಕೂರ್ (26), ಅವರ ಪತ್ನಿ ರುಖ್ಸಾರ್ (27), ರಿಹಾನ್ನಾ (38) ಮತ್ತು ಸುಲ್ತಾನಾ (35) ಮಿರ್ಜಾಪುರ ಗ್ರಾಮದಲ್ಲಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ವ್ಯಾನ್ ಸಂಪೂರ್ಣ ಜಖಂಗೊಂಡಿದೆ.
ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.