ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 20 ರಂದು ಉತ್ತರ ಪ್ರದೇಶದ ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ (October 18) ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ವಾರ ಕಾರ್ಯಾರಂಭ ಮಾಡಲಿದ್ದು, ಭಾರತದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಯಾತ್ರಿಕರಿಗೆ ವಿಮಾನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ.
‘ಉದ್ಘಾಟನಾ ವಿಮಾನವು ಶ್ರೀಲಂಕಾದ ಕೊಲಂಬೊದಿಂದ 125 ಗಣ್ಯರು ಮತ್ತು ಬೌದ್ಧ ಸನ್ಯಾಸಿಗಳನ್ನು ಹೊತ್ತ ವಿಮಾನ ,ನಿಲ್ದಾಣದಲ್ಲಿ ಇಳಿಯಲಿದೆ.ಭಗವಾನ್ ಬುದ್ಧನ ಮಹಾಪರಿನಿರ್ವಾಣ ಸ್ಥಳವನ್ನು ಭೇಟಿ ಮಾಡಲು ವಿಶ್ವದಾದ್ಯಂತ ಬೌದ್ಧರಿಗೆ ಇರುವ ಅನುಕೂಲತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಸಚಿವಾಲಯ ಹೇಳಿದೆ.ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಕುಶಿನಗರ ವಿಮಾನ ನಿಲ್ದಾಣವನ್ನು ಹೊಸ ಟರ್ಮಿನಲ್ ಕಟ್ಟಡದೊಂದಿಗೆ 3600 ಚದರ ಮೀಟರ್ ವಿಸ್ತೀರ್ಣದಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರೂ 260 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ.
ಉದ್ಘಾಟನೆಯ ನಂತರ ಮಹಾಪರಿನಿರ್ವಾಣ ಸ್ತೂಪ ಮತ್ತು ದೇವಾಲಯದ ಬೌದ್ಧಧರ್ಮದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.