ದೆಹಲಿ : ಬಿಜೆಪಿ ಪಾಳೆಯದಲ್ಲೀಗ ಸಂಭ್ರಮ ಮುಗಿಲು ಮುಟ್ಟಿದೆ. ಈ ವರ್ಷದ ಪ್ರಾರಂಭದಲ್ಲೇ ಸಿಹಿ ಸಿಕ್ಕಿದೆ. ಪಂಚರಾಜ್ಯಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ನಾಲ್ಕೂ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಮುಂದಾಗಿದೆ. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದ ಬೆನ್ನಲ್ಲೇ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದರು. ಇಂದು ಅವರು ಗುಜರಾತ್ಗೆ ಭೇಟಿ ಕೊಡಲಿದ್ದಾರೆ. ಗುಜರಾತ್ನಲ್ಲಿ ಈ ವರ್ಷ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಪೂರ್ವಭಾವಿ ತಯಾರಿಯನ್ನು ಈಗಿನಿಂದಲೇ ಪ್ರಾರಂಭಿಸಲು ಪ್ರಧಾನಿ ಮೋದಿ ಎರಡು ದಿನಗಳ ಭೇಟಿ ಹಮ್ಮಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 10 ಗಂಟೆಗೆ ಅಹ್ಮದಾಬಾದ್ ತಲುಪುವರು. ಅಲ್ಲಿಂದ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನಕಚೇರಿ ಕಮಲಂವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಹ್ಮದಾಬಾದ್ನಿಂದ ಬಿಜೆಪಿ ಕಚೇರಿವರೆಗೆ ಸುಮಾರು 10 ಕಿಮೀ ದೂರದ ರೋಡ್ ಶೋ ಇದಾಗಲಿದ್ದು, 4 ಲಕ್ಷಕ್ಕೂ ಅಧಿಕ ಜನರು ಸೇರುವ ಅಂದಾಜಿದೆ. ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸಂಸದರು, ಶಾಸಕರು, ಪದಾಧಿಕಾರಿಗಳು ಮತ್ತು ರಾಜ್ಯ ಕಾರ್ಯಕಾರಿ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅಹ್ಮದಾಬಾದ್ನ ಜಿಎಂಡಿಸಿ ಮೈದಾನದಲ್ಲಿ, ಪಂಚಾಯತ್ ರಾಜ್ ಸಂಸ್ಥೆಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಸಂಜೆ ಗುಜರಾತ್ನಲ್ಲಿಯೇ ತಂಗಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ನಾಳೆ (ಮಾರ್ಚ್ 12) ಅಲ್ಲಿನ ರಾಷ್ಟ್ರೀಯ ಡಿಫೆನ್ಸ್ ಯೂನಿವರ್ಸಿಟಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಭಾಷಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಇರಲಿದ್ದಾರೆ. ಇದಾದ ಬಳಿಕ ಸಂಜೆ, ಖೇಲ್ ಮಹಾಕುಂಭ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಈ ಖೇಲ್ ಮಹಾಕುಂಭ ಕಾರ್ಯಕ್ರಮದಡಿ ರಾಜ್ಯಾದ್ಯಂತ ಸುಮಾರು 500 ಪ್ರದೇಶಗಳಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ಈಗಾಗಲೇ 47ಕ್ಕೂ ಲಕ್ಷಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಂದಹಾಗೇ, ಈ ಖೇಲ್ ಮಹಾಕುಂಭ ಕಾರ್ಯಕ್ರಮ, ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತಮಹೋತ್ಸವದ ಒಂದು ಭಾಗವೇ ಆಗಿದೆ.