ನವದೆಹಲಿ : ಸುಪ್ರೀಂ ಕೋರ್ಟ್ ವಿರುದ್ಧ ಪ್ರಧಾನಿ ಮೋದಿ ಅಸಮಾಧಾನದಿಂದ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಾಗಿದ್ದರೆ ಸುದಾಮನಿಂದ ಅವಲಕ್ಕಿ ತೆಗೆದುಕೊಂಡ ಕೃಷ್ಣನನ್ನು ಸುಪ್ರೀಂಕೋರ್ಟ್ ಭ್ರಷ್ಟಾಚಾರಿ ಎಂದು ಕರೆಯುತ್ತಿತ್ತು ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ನಿಂದ ಹೊರ ಹಾಕಲ್ಪಟ್ಟ ಆಚಾರ್ಯ ಪ್ರಮೋದ್ ಕೃಷ್ಣಂ ಅವರ ಕುರಿತಾದ ಕಾರ್ಯ ಕ್ರಮವೊಂದರಲ್ಲಿ ಉತ್ತರ ಪ್ರದೇಶ ದಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ, ‘ನಿಮಗೆ ನೀಡಲು ನನ್ನ ಬಳಿ ಭಾವನೆಗಳ ಹೊರತಾಗಿ ಬೇರಾವುದೇ ವಸ್ತುಗಳಿಲ್ಲ ಎಂದು ಆಚಾರ್ ಹೇಳಿದರು. ಆಚಾರೈರು ಏನೂ ಕೊಡದೇ ಇದ್ದದ್ದೇ ಒಳ್ಳೆಯದಾಯಿತು.
ಈಗಿನ ಕಾಲಘಟ್ಟದಲ್ಲಿ ಸುದಾಮ ಕೃಷ್ಣನಿಗೆ ಅವಲಕ್ಕಿ ಕೊಟ್ಟಿದ್ದು ವಿಡಿಯೋವಾಗಿ ಹೊರ ಬಂದಿದ್ದರೆ, ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ದಾಖಲಾಗುತ್ತಿತ್ತು.ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೃಷ್ಣನನ್ನು ಭ್ರಷ್ಟಾಚಾರಿ ಎಂದು ಕರೆಯುತ್ತಿತ್ತು. ಹೀಗಾಗಿ ನೀವು ಭಾವನೆಗಳನ್ನಷ್ಟೇ ಹಂಚಿಕೊಂಡಿದ್ದು ಒಳ್ಳೆದಾಯಿತು ಎಂದು ಹೇಳಿದರು.