ನವದೆಹಲಿ: ತನ್ನ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕ್ಯಾಶ್ ಫಾರ್ ಕ್ವಶ್ಚನ್ ಪ್ರಕರಣದಲ್ಲಿ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ಮಹುವಾ ಮೊಯಿತ್ರಾ ಅವರ ಸಂಸತ್ ಸದಸ್ಯತ್ವವನ್ನು ಶುಕ್ರವಾರ ರದ್ದುಗೊಳಿಸಲಾಗಿದೆ. ಮಹುವಾ ಮೊಯಿತ್ರಾ ಅವರು ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಬಳಿಕ ನೀತಿ ಸಂಹಿತೆ ಸಮಿತಿ ರಚನೆಯಾಗಿ ಸುದೀರ್ಘ ತನಿಖೆ ನಡೆಸಿದ ಬಳಿಕ ನೈತಿಕ ಸಮಿತಿ ಶುಕ್ರವಾರ ಲೋಕಸಭೆಯಲ್ಲಿ ಈ ಪ್ರಕರಣದ ವರದಿ ಸಲ್ಲಿಸಿದ್ದು ಗಮನಾರ್ಹ.
ಲೋಕಸಭಾ ಸದಸ್ಯತ್ವದಿಂದ ತನ್ನನ್ನು ಉಚ್ಚಾಟನೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಮೊಯಿತ್ರಾ, ಸರ್ಕಾರವು ಲೋಕಸಭೆಯ ನೈತಿಕ ಸಮಿತಿಯನ್ನು, ಪ್ರತಿಪಕ್ಷಗಳನ್ನು ತಲೆಬಾಗುವಂತೆ ಒತ್ತಾಯಿಸಲು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದರು.