ಗುವಾಹಟಿ: ಸರಕು ಸಾಗಣೆ ರೈಲು ಡಿಕ್ಕಿಯಾಗಿ ಕಾಡಾನೆ ಮೃತಪಟ್ಟ ಘಟನೆ ಡಿಗಾರು-ಪನ್ಬರಿ ವಿಭಾಗದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ. ಹೀಗಾಗಿ ಆನೆ ಕಾರಿಡಾರ್ ಗಳಲ್ಲಿ ಹಾದು ಹೋಗುವ ರೈಲು ಮಾರ್ಗಗಳಲ್ಲಿ ಎಚ್ಚರಿಕೆ ವಹಿಸುವಂತೆ ರೈಲ್ವೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಘಟನೆ ಸಂಭವಿಸಿದ ಸ್ಥಳ ಆನೆ ಕಾರಿಡಾರ್ ನಿಂದ ಹೊರಗಿದ್ದು, ಆನೆ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್) ಯಂತ್ರವನ್ನು ಈ ಪ್ರದೇಶದಲ್ಲಿ ಅಳವಡಿಸಿರದ ಕಾರಣ ಹಳಿಯ ಮೇಲೆ ಆನೆ ಇರುವುದು ಗಮನಕ್ಕೆ ಬಂದಿರಲಿಲ್ಲ. ಗುವಾಹಟಿ ವಿಭಾಗದಲ್ಲಿ ರೈಲ್ವೆ ಇಲಾಖೆ ಆನೆ ಚಲವಲನ ಗುರುತಿಸಲು ಐಡಿಎಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಇದರಿಂದ ಹಲವು ಅಪಘಾತಗಳು ತಪ್ಪಿವೆ.
ಈ ತಂತ್ರಜ್ಞಾನ ಅಳವಡಿಕೆಗೆ ಇಲಾಖೆ 77 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. AI-ಆಧಾರಿತ ಐಡಿಎಸ್ ಸಾಫ್ಟ್ವೇರ್ ಮೂಲಕ 60 ಕಿ.ಮೀ.ವರೆಗಿನ ಆನೆ ಸೇರಿದಂತೆ, ಕಾಡುಪ್ರಾಣಿಗಳ ಚಲನೆಯನ್ನು ಗುರುತು ಪತ್ತೆ ಮಾಡಬಹುದು. ಅಲ್ಲದೆ ರೈಲು ಹಳಿಗಳಲ್ಲಿ ವಿಧ್ವಂಸಕ ಕೃತ್ಯ, ಭೂಕುಸಿತ ಇತ್ಯಾದಿ ವಿಷಯಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ.