ಬೆಂಗಳೂರು: ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಮೊದಲು ತನಿಖೆ ನಡೆಸಲಾಗುವುದು ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ. ಪ್ರಚಾರಕ್ಕಾಗಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಗುತ್ತಿಗೆದಾರರ ಸಂಘದವರ ಬಿಲ್ ಪಾವತಿಗೆ ಮೊದಲು ತನಿಖೆ ನಡೆಸಲಾಗುವುದು. ನಗರದಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್ಗಳ ಸತ್ಯಾಸತ್ಯತೆ ಪರಿಶೀಲಿಸಲು ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚಿಸಲಾಗಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗುತ್ತಿಗೆದಾರರನ್ನು ನವದೆಹಲಿಗೆ ಕರೆಯಿಸಿ ಹೇಳಿಕೆಗಳನ್ನು ನೀಡುವಂತೆ ಪ್ರೇರೇಪಿಸುತ್ತಿರುವುದು ಯಾರು? ದೂರಿನ ಕುರಿತು ಮಾಧ್ಯಮದ ಮುಂದೆ ಹೇಳಿಕೆ ನೀಡುವಂತೆ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತು. ಕಾಮಗಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸರಕಾರ ನ್ಯಾಯ ಒದಗಿಸಲಿದೆ ಎಂದರು.
ಕಾಮಗಾರಿ ಬಿಲ್ ಪಾವತಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿರುವ ಗುತ್ತಿಗೆದಾರರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊರೆಹೋಗಿದ್ದು, ಬಾಕಿ ಬಿಲ್ ಪಾವತಿ ಸಂಬಂಧ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ಗೆ ಕೂಡ ಗುತ್ತಿಗೆದಾರರ ಸಂಘದವರು ದೂರು ನೀಡಿದ್ದಾರೆ. ಕಳೆದ 26 ತಿಂಗಳಿಂದ ಸರ್ಕಾರ ಬಿಲ್ಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘವು ಆರೋಪಿಸಿದೆ. ಬಾಕಿ ಬಿಲ್ಗಳ ತೆರವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ನಿರ್ಧರಿಸಿದೆ.