ವಿಜಯವಾಡ: ಆಂಧ್ರಪ್ರದೇಶದ ವಿವಿಧ ಭಾಗಗಳ ಜನರು ಎನ್ಟಿಆರ್ ಜಿಲ್ಲೆಯ ಗುಡಿಮೆಟ್ಲಾ ಗ್ರಾಮಕ್ಕೆ ವಜ್ರ ಬೇಟೆಗೆ ಬಂದಿದ್ದು , ಕುಟುಂಬವೊಂದಕ್ಕೆ 60 ಲಕ್ಷ ರೂಪಾಯಿ ಮೌಲ್ಯದ ವಜ್ರ ದೊರೆತಿದೆ ಎಂಬ ಸುದ್ದಿ ಹಬ್ಬಿದೆ.
ಪ್ರತಿ ಮಳೆಗಾಲದ ವೇಳೆ ಚಂದರ್ಲಾಪ್ಡು ಮಂಡಲ ವ್ಯಾಪ್ತಿಯ ಗ್ರಾಮಕ್ಕೆ ಸುತ್ತಮುತ್ತಲಿನ ಗ್ರಾಮಗಳಿಗೆ ರಾಜ್ಯದ ಎಲ್ಲ ಭಾಗಗಳ ಜನರು ಬಂದು ವಜ್ರ ಬೇಟೆಯಲ್ಲಿ ತೊಡಗುವುದು ಸಾಮಾನ್ಯವಾಗಿದೆ.
ಶನಿವಾರ ಭೂಮಿ ಅಗೆಯುವ ವೇಳೆ ಸತ್ತೇನಪಳ್ಳಿಯ ಕುಟುಂಬವೊಂದಕ್ಕೆ 6 ಮುಖಗಳ ವಜ್ರ ದೊರೆತಿದೆ. ಕುಟುಂಬ ಸದಸ್ಯರು ವಜ್ರವ್ಯಾಪಾರಿಗಳನ್ನು ಸಂಪರ್ಕಿಸಿದ್ದು, ಸಿಕ್ಕಿರುವ ವಜ್ರದ ಮೌಲ್ಯ 60 ಲಕ್ಷ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ದೇವಾಲಯದ ಸಮೀಪವಿರುವ ಬೆಟ್ಟದಲ್ಲಿ ಬೇಟೆಯಾಡಲು ಪ್ರಾರಂಭಿಸುತ್ತಾರೆ. ಗುಡಿಮೆಟ್ಲ ಪ್ರದೇಶವು ರಾಜರ ಆಳ್ವಿಕೆಗೆ ಒಳಪಟ್ಟಿದ್ದರಿಂದ, ಈ ಪ್ರದೇಶದಲ್ಲಿ ಮಣ್ಣಿನಡಿಯಲ್ಲಿ ಹುದುಗಿರುವ ಅನೇಕ ವಜ್ರಗಳಿವೆ ಎಂದು ಸ್ಥಳೀಯರು ನಂಬುತ್ತಾರೆ.