ವಿಶಾಖಪಟ್ಟಣಂ: ಕಳೆದ ವಾರ ನಡೆದಿದ್ದ ಎನ್ಆರ್ಐ ಸತೀಶ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಸತೀಶ್ ಪತ್ನಿ ರಮ್ಯಾ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ. ವಿಶಾಖಪಟ್ಟಣದ
ರಮ್ಯಾ ಶಾಲಾ ದಿನಗಳಲ್ಲೇ ಭಾಷಾ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇಬ್ಬರೂ ಬೇರೆ ಮದುವೆ ಆಗಿದ್ದರು. ಇತ್ತೀಚೆಗಷ್ಟೇ ಅವರಿಬ್ಬರು ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಮತ್ತೆ ಒಂದಾಗಿದ್ದರು. ಪರಸ್ಪರ ನಂಬರ್ ವಿನಿಮಯ ಮಾಡಿಕೊಂಡು ಮತ್ತೆ ಸರಸದಲ್ಲಿ ತೊಡಗಿದ್ದರು. ಆದರೆ ಈ ಸಲ್ಲಾಪಕ್ಕೆ ರಮ್ಯಾ ಗಂಡ ಸತೀಶ್ ಅಡ್ಡಲಾಗಿದ್ದ. ಹೀಗಾಗಿ ಇಬ್ಬರು ಸೇರಿ ಸತೀಶ್ ಕೊಲೆಗೆ ಸಂಚು ರೂಪಿಸಿ, ಕಳೆದ ವಾರ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ಸತೀಶ್, ವಿಶಾಖಪಟ್ಟಣದ ಪಾಲಮ್ ನಿವಾಸಿ. ಕಳೆದ ವಾರ ಪತ್ನಿ ಮತ್ತು ಮಕ್ಕಳೊಂದಿಗೆ ನಡೆದು ಹೋಗುವಾಗ ಅಪರಿಚಿತ ವ್ಯಕ್ತಿಯೊಬ್ಬ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿ ಸತೀಶ್ನನ್ನು ಕೊಲೆ ಮಾಡಿದ್ದ. ಇದಾದ ಬಳಿಕ ರಮ್ಯಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ಸತೀಶ್ ದುಬೈನಲ್ಲಿ ತನ್ನ ಸ್ನೇಹಿತ ಸುಧಾಕರ್ ರೆಡ್ಡಿಯೊಂದಿಗೆ ಸಣ್ಣ ಉದ್ಯಮವೊಂದನ್ನು ನಡೆಸುತ್ತಿದ್ದ. ವ್ಯವಹಾರದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸತೀಶ್ ಭಾರತದಲ್ಲೇ ನೆಲೆಸಿದ್ದ. ಇಬ್ಬರ ನಡುವೆ ಅನೇಕ ಬಾರಿ ಫೋನ್ ಕರೆಗಳು ವಿನಿಮಯ ಆಗಿತ್ತು. ಇದಕ್ಕೆಲ್ಲಾ ಕಾರಣ ಸುಧಾಕರ್ ರೆಡ್ಡಿ ಎಂದು ರಮ್ಯಾ ದೂರು ನೀಡಿದ್ದಳು. ಆದರೂ ಪೊಲೀಸ್ ತನಿಖೆಯಲ್ಲಿ ಇದರಲ್ಲಿ ಸುಧಾಕರ್ ರೆಡ್ಡಿ ಕೈವಾಡ ಇಲ್ಲ ಎಂದು ಬಯಲಾಗಿತ್ತು.
ಇದರ ನಡುವೆ ಸತೀಶ್ ಪತ್ನಿ ರಮ್ಯಾ ನಡೆ ಅನುಮಾನ ಮೂಡುವಂತಿತ್ತು. ಆಳವಾಗಿ ತನಿಖೆಗೆ ಇಳಿದ ಪೊಲೀಸರಿಗೆ ರಮ್ಯಾ ಹೈಸ್ಕೂಲ್ನಲ್ಲೇ ಬಾಷಾನನ್ನು ಪ್ರೀತಿಸುತ್ತಿದ್ದಳು ಎಂಬಾ ವಿಚಾರ ತಿಳಿದಿದೆ. ರಮ್ಯಾ ಮದುವೆ ಆಗುವವರೆಗೂ ಇಬ್ಬರ ನಡುವಿನ ಪ್ರೇಮ ಸಂಬಂಧ ಹಾಗೇ ಮುಂದುವರಿದಿತ್ತು. ಇದರ ನಡುವೆ ರಮ್ಯಾ ಮತ್ತು ಬಾಷಾಗೆ ಬೇರೆ ಬೇರೆ ಮದುವೆ ಆಗಿ, ಇಬ್ಬರ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಹೀಗಿರುವಾಗ ಹೈಸ್ಕೂಲ್ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಇಬ್ಬರ ಪರಿಚಯ ಆಗಿ, ನಂತರ ದೈಹಿಕ ಸಂಪರ್ಕವೂ ಮುಂದುವರಿದಿದೆ. ಇಬ್ಬರು ಓಡಿ ಹೋಗುವ ಸಂಚು ರೂಪಿಸಿದ್ದರು. ಅದು ಸಾಧ್ಯವಾಗದಿದ್ದಾಗ ನಂತರ ಮಾಡಿದ್ದೇ ಕೊಲೆ ಮಾಡುವ ಸಂಚು.
ಗಂಡನನ್ನು ಕೊಲೆ ಮಾಡಿದರೆ ಪ್ರಿಯಕರನ ಜತೆ ಆರಾಮಾಗಿ ಇರಬಹುದು ಎಂಬುದು ರಮ್ಯಾಳ ದುರಾಲೋಚನೆ ಆಗಿತ್ತು. ಈ ಹಂತದಲ್ಲಿ ಆಕೆಗೆ ಕಾನೂನಿನ ಭಯವೂ ಇರಲಿಲ್ಲ. ರಮ್ಯಾ ಮತ್ತು ಬಾಷಾ ಸಂಚು ರೂಪಿಸಿ ಕೊಲೆ ಮಾಡಿ, ಅದನ್ನು ಸುಧಾಕರ್ ರೆಡ್ಡಿ ತಲೆಗೆ ಕಟ್ಟಲು ಮುಂದಾಗಿದ್ದರು. ಅಂತಿಮವಾಗಿ ರಮ್ಯಾ ಮತ್ತು ಬಾಷಾ ಸಿಕ್ಕಿಬಿದ್ದಿದ್ದು, ವಿಶಾಖಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ರಮ್ಯಾ ಜೈಲಿನ ಹಾದಿ ಹಿಡಿದಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.