ತಮಿಳುನಾಡಿನ ಕನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ನಾಳೆ (ಶುಕ್ರವಾರ) ನಡೆಯಲಿದೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರ ಪಾರ್ಥೀವ ಶರೀರವನ್ನು ಇಂದು ದೆಹಲಿಗೆ ತರಲಿದ್ದು, ಸೇನಾ ವಿಧಿ ವಿಧಾನಗಳಂತೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಮೃತದೇಹಗಳನ್ನು ಆಯಾ ರಾಜ್ಯಗಳಿಗೆ ರವಾನೆ ಮಾಡಲಾಗಲುತ್ತದೆ. ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಅವರ ಮೃತದೇಹವನ್ನು ದೆಹಲಿಯಲ್ಲಿನ ಅವರ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ದೆಹಲಿಯ ಕಂಟೋನ್ಮೆಂಟ್ ನ ಸ್ಕ್ವೇರ್ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ.
ಬುಧವಾರ ಜನರಲ್ ರಾವತ್ ಹಾಗೂ ಪತ್ನಿ ಸೇರಿದಂತೆ 11 ಮಂದಿ ಸೇನಾಧಿಕಾರಿಗಳು ರಕ್ಷಣಾ ಕಾಲೇಜಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಭಾಗವಹಿಸಲುದೆಹಲಿಯಿಂದ ತಮಿಳುನಾಡಿಗೆ ಸೇನಾ ಹೆಲಿಕಾಪ್ಟರ್ ಮೂಲಕ ತೆರಳುತ್ತಿದ್ದರು. ಆದರೆ ಲ್ಯಾಂಡಿಂಗ್ ಗೆ 10 ನಿಮಿಷ ಇರುವಾಗ ಕನೂರಿನ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ.