ನವದೆಹಲಿ, ;ವಕೀಲರ ಮುಷ್ಕರಕ್ಕೆ ಕಡಿವಾಣ ಹಾಕಲು, ನ್ಯಾಯಾಲಯ ಕಲಾಪ ಬಹಿಷ್ಕರಕ್ಕೆ ನಿಯಂತ್ರಣ ಹೇರುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ನಿಯಾಮವಳಿಗಳನ್ನು ರಚಿಸುತ್ತಿರುವುದಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಸುಪ್ರೀಂಕೋರ್ಟ್ಗೆ ಹೇಳಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರುಗಳನ್ನೊಳಗೊಂಡ ವಿಭಾಗೀಯ ಪೀಠ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿದ್ದು, ಕಳೆದ ವಿಚಾರಣೆಯಲ್ಲಿ ಬಾರ್ ಕೌನ್ಸಿಲ್ನ ಅಭಿಪ್ರಾಯ ತಿಳಿಸುವಂತೆ ಸೂಚಿಸಿತು. ಅದರ ಪ್ರಕಾರ ಇಂದು ನ್ಯಾಯಾಲಯದ ಮುಂದೆ ಹಾಜರಾದ ಕೌನ್ಸಿಲ್ನ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಶೀಘ್ರವೇ ನಿಯಮಾವಳಿಗಳನ್ನು ರೂಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಬಿಸಿಐ ಎಲ್ಲಾ ರಾಜ್ಯಗಳ ಬಾರ್ಕೌನ್ಸಿಲ್ ಜತೆ ಸಭೆ ನಡೆಸಿದೆ. ಮುಷ್ಕರಗಳನ್ನು ಹತ್ತಿಕ್ಕುವುದು, ಬಹಿಷ್ಕಾರಗಳಿಗೆ ತಡೆಹಾಕುವುದು, ಬಾರ್ಕೌನ್ಸಿಲ್ನೊಂದಿಗೆ ನೋಂದಣಿಯಾದ ವಕೀಲರು ಸಮರ್ಥನೀಯ ಕಾರಣವಿಲ್ಲದೆ ಮುಷ್ಕರ ನಡೆಸುವುದಕ್ಕೆ ಅವಕಾಶ ನೀಡದಂತೆ ನಿಯಮಾವಳಿಗಳನ್ನು ರೂಪಿಸಲಾಗುವುದು. ವಕೀಲರು ಸಾಮಾಜಿಕ ಜಾಲತಾಣಗಳಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡುವುದನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.