ಕೋವಿಡ್ ಲಸಿಕೆ ನೀಡುವಲ್ಲಿ ನಾವು ಮಾಡಿದ ಹೊಸ ದಾಖಲೆ ವಿಶ್ವಕ್ಕೆ ಭಾರತದ ಶಕ್ತಿಯನ್ನು ಸಾಬೀತು ಮಾಡಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
‘ಮನ್ ಕಿ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, 100 ಕೋಟಿ ಡೋಸ್ ಲಸಿಕೆ ನೀಡಿರುವುದಕ್ಕೆ ಆರೋಗ್ಯ ಕಾರ್ಯಕರ್ತರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು.
ಉತ್ತರಾಖಂಡ್ನ ದುರ್ಗಮ ಪ್ರದೇಶಗಳಿಗೆ ತೆರಳಿ, ಅಲ್ಲಿನ ಜನರಿಗೆ ಕೊರೋನಾ ಲಸಿಕೆ ಬಗ್ಗೆ ಅರಿವು ಮೂಡಿಸಿ, ಪ್ರತಿಯೊಬ್ಬರೂ ಲಸಿಕೆ ಪಡೆಯಲು ಶ್ರಮಿಸಿದ ಸಹಾಯಕ ನರ್ಸ್ ಪೂನಂ ಎಂಬುವರ ಜೊತೆ ಮಾತನಾಡಿದರು. “ನೀವು ಲಸಿಕೆ ಕೊಡಲು ವಹಿಸಿದ ಶ್ರಮದ ಬಗ್ಗೆ ಹೇಳಿ” ಎಂದು ಅವರ ಬಾಯಲ್ಲೇ ಕೇಳಿದ್ದಾರೆ.
ನಾವು ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತೆಯ ದಿನವಾಗಿ ಆಚರಿಸುತ್ತೇವೆ. ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವ ಕನಿಷ್ಠ ಒಂದು ಚಟುವಟಿಕೆಯೊಂದಿಗೆ ನಾವು ಸಹಭಾಗಿಯಾಗಬೇಕು ಎಂದು ಕರೆ ನೀಡಿದರು.
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕುರಿತು ಮಾತನಾಡಿ, ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಯಾವುದಾದರೂ ಒಂದು ಕಾರ್ಯಕ್ರಮದಲ್ಲಿಯಾದರೂ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಇಬ್ಬರು ಸಹೋದರಿಯರು ಭಾರತೀಯ ಸೇನೆ ಮತ್ತು ಸರ್ಕಾರಿ ಕಚೇರಿಗಳಿಗಾಗಿ ರಾಷ್ಟ್ರಧ್ವಜ ತಯಾರು ಮಾಡುತ್ತಿರುವ ಬಗ್ಗೆ ಮಾತನಾಡಿ, ಆ ಸಹೋದರಿಯ ಕಾರ್ಯವನ್ನು ಶ್ಲಾಘಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ತುಂಬ ಇದೆ. ಇತ್ತೀಚೆಗಷ್ಟೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಚಿತ್ರಾತ್ಮಕ ಜೀವನಚರಿತ್ರೆಯನ್ನು ಬಿಡುಗಡೆ ಮಾಡಿದೆ. ಇದನ್ನು ಹೆಚ್ಚೆಚ್ಚು ಜನರು ನೋಡಬೇಕು ಮತ್ತು ಪಟೇಲ್ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಭಾರತವು ಸಾರಿಗೆಗಾಗಿ ಡ್ರೋನ್ಗಳನ್ನು ಬಳಸುವಲ್ಲಿ ಕೆಲಸ ಮಾಡುತ್ತಿದೆ. ಅದು ಮನೆಯಲ್ಲಿ ಸರಕುಗಳನ್ನು ತಲುಪಿಸಲು, ತುರ್ತು ಸಂದರ್ಭಗಳಲ್ಲಿ ಸಹಾಯ ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಸಹಕಾರಿಯಾಗಲಿದೆ. ಕೋವಿಡ್ 19 ಲಸಿಕೆಗಳ ವಿತರಣೆಗೂ ಡ್ರೋನ್ಗಳನ್ನು ಬಳಸಲಾಗುತ್ತಿದೆ ಎಂದರು.
ಮುಂದಿನ ತಿಂಗಳು ಭಾರತವು ‘ಭಗವಾನ್ ಬಿರ್ಸಾ ಮುಂಡಾ’ ಜಯಂತಿಯನ್ನು ಆಚರಿಸುತ್ತದೆ. ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವುದು, ಪರಿಸರದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅನ್ಯಾಯದ ವಿರುದ್ಧ ಹೋರಾಡುವುದು ಹೇಗೆ ಎಂದು ಅವರ ಜೀವನ ಚಿತ್ರಣ ನಮಗೆ ಕಲಿಸಿದೆ. ಯುವಕರು ಅವರ ಬಗ್ಗೆ ಓದಿ ತಿಳಿಯಬೇಕು ಎಂದು ಒತ್ತಾಯಿಸಿದರು.
ರಂಗೋಲಿ ಕುರಿತು ಮಾತನಾಡಿದ ಮೋದಿ, ವಿವಿಧ ರಾಜ್ಯಗಳಲ್ಲಿ ರಂಗೋಲಿಯನ್ನು ವಿವಿಧದ ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತಿ ಸಚಿವಾಲಯ ಈ ಕುರಿತು ರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಲಿದೆ ಎಂದು ಹೇಳಿದರು.
ಐಕ್ಯತಾ ದಿನದ ಅಂಗವಾಗಿ ತ್ರಿಪುರ ಪೊಲೀಸರು ತ್ರಿಪುರದಿಂದ ಏಕತಾ ಪ್ರತಿಮೆ ತನಕ ಬೈಕ್ ಜಾಥಾ ಆಯೋಜನೆ ಮಾಡಿದ್ದಾರೆ. ಇದರಿಂದದ ಪೂರ್ವ ಮತ್ತು ಪಶ್ಚಿಮವನ್ನು ಬೆಸೆದಂತೆ ಆಗುತ್ತದೆ ಎಂದರು.