ಹೊಸದಿಲ್ಲಿ: ಪಕ್ಷಕ್ಕೆ ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಪಕ್ಷದ ಸಂಸದರಿಂದಲೇ ದೇಣಿಗೆ ಸಂಗ್ರಹಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ”ಪಕ್ಷದ ಸಂಸದರು ವಾರ್ಷಿಕ 50 ಸಾವಿರ ರೂ. ಕೊಡುಗೆ ನೀಡಬೇಕು,” ಎಂದು ಹೊಸ ಆದೇಶ ಹೊರಡಿಸಿದೆ.
”ವೆಚ್ಚ ಕಡಿತಗೊಳಿಸಲು ಪಕ್ಷ ತೀರ್ಮಾನಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳ ಭತ್ಯೆಯನ್ನು 15 ಸಾವಿರ ರೂ. ನಿಂದ 12 ಸಾವಿರ ರೂ.ಗೆ ಇಳಿಸಲಾಗಿದೆ. ಅಲ್ಲದೆ, ವಿಮಾನದ ಟಿಕೆಟ್ ದರ ಹೆಚ್ಚಿದ್ದರೆ ನಾಯಕರು ರೈಲಿನಲ್ಲಿ
ಪ್ರಯಾಣ ಮಾಡಬೇಕು . 1400 ಕಿ.ಮೀ. ದೂರದ ರೈಲು ಪ್ರಯಾಣದ ದರವನ್ನು ಪಕ್ಷವು ಕೊಡಲಿದೆ .
ಜತೆಗೆ ಕ್ಯಾಂಟೀನ್, ವಿದ್ಯುತ್, ಇಂಧನ, ಪತ್ರಿಕೆ ಸೇರಿದಂತೆ ಸಾಧ್ಯವಾದಷ್ಟು ಖರ್ಚುಗಳನ್ನು ಕಡಿಮೆ ಮಾಡಿ,” ಎಂದು ಸೂಚಿಸಿದ್ದೇವೆ ಎಂಬುದಾಗಿ ಕಾಂಗ್ರೆಸ್ ಖಜಾಂಚಿ ಪವನ್ ಬನ್ಸಾಲ್ ಹೇಳಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ಸಿನ ದೇಣಿಗೆ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಇತ್ತೀಚಿನ ಚುನಾವಣೆ ಆಯೋಗ ವರದಿ ಹೇಳಿದೆ. ಇದರ ಬೆನ್ನಲ್ಲೇ ಪಕ್ಷವು ವೆಚ್ಚ ಕಡಿತಕ್ಕೆ ಮುಂದಾಗಿದೆ.