ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ವ್ಯಕ್ತಿಗಳು ಸೇರಿದಂತೆ ಆರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಈ ಉಗ್ರರು ಉದ್ದೇಶಿತ ವ್ಯಕ್ತಿಗಳ ಹತ್ಯೆ ಹಾಗು ದೇಶದ ವಿವಿಧೆಡೆ ಬಾಂಬ್ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತ ಮಾಹಿತಿ ನೀಡಿದ ದೆಹಲಿ ವಿಶೇಷ ಪೊಲೀಸ್ ವಿಭಾಗದ ವಿಶೇಷ ಆಯುಕ್ತ ಪ್ರಮೋದ್ ಕುಶ್ವಾಹ, ಬಂಧಿತರು ದೇಶಾದ್ಯಂತ ಉದ್ದೇಶಿತ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಲು ಯೋಜಿಸುತ್ತಿದ್ದರು. ಬಂಧಿತರಿಂದ ಸ್ಫೋಟಕಗಳು ಮತ್ತು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋಟಾದಲ್ಲಿ ಸಮೀರ್ ಎಂಬ ಓರ್ವನನ್ನು, ದೆಹಲಿಯಿಂದ ಇಬ್ಬರು ವ್ಯಕ್ತಿಗಳು ಮತ್ತು ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಲಾಗಿದೆ. 6 ಜನರಲ್ಲಿ, ಇಬ್ಬರನ್ನು ಮಸ್ಕತ್ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ಸ್ಫೋಟಕಗಳು ಮತ್ತು ಬಂದೂಕುಗಳನ್ನು ಬಳಸುವ ಕುರಿತು 15 ದಿನಗಳ ಕಾಲ ತರಬೇತಿ ನೀಡಲಾಗಿದೆ ಎಂದು ತಿಳಿಸಿದೆ.
ಬಂಧಿತರು ತಮ್ಮ ಗುಂಪಿನಲ್ಲಿ 14-15 ಬಾಂಗ್ಲಾ ಮಾತನಾಡುವ ವ್ಯಕ್ತಿಗಳು ಸಹ ತರಬೇತಿ ಪಡೆದಿರಬಹುದು ಎಂದು ಬಂಧಿತರು ಹೇಳಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ವಿಭಾಗ ಹೇಳಿದೆ. ಅವರು 2 ತಂಡಗಳನ್ನು ರಚಿಸಿದ್ದರು. ಒಂದನ್ನು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಸಂಘಟಿಸಿದ್ದಾನೆ. ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳನ್ನು ತಂದು, ಅವುಗಳನ್ನು ಭಾರತದಲ್ಲಿ ಅಡಗಿಸಿಡಲಾಗುತ್ತಿತ್ತು. ಇವರಿಗೆ ಹವಾಲಾ ಮೂಲಕ ಧನಸಹಾಯ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.