ಯುದ್ಧ ಪೀಡಿತ ಉಕ್ರೇನ್ನಿಂದ ಕಳೆದ 24 ಗಂಟೆಗಳಲ್ಲಿ ಸುಮಾರು 4000 ಭಾರತೀಯರನ್ನು ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಖಚಿತ ಪಡಿಸಿದೆ. ಉಕ್ರೇನ್ನಲ್ಲಿ ಸಿಲುಕಿದ್ದ ನಮ್ಮ ದೇಶದ ನಾಗರೀಕರನ್ನು ರಕ್ಷಿಸಿ, ಉಕ್ರೇನಿನ ನೆರೆಯ ದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿಂದ ಅವರನ್ನು ಹೊತ್ತ 15 ವಿಮಾನಗಳು ಭಾರತಕ್ಕೆ ಆಗಮಿಸಲಿವೆ.
ಇನ್ನು, ಇದುವರೆಗೆ ಆಪರೇಷನ್ ಗಂಗಾ ಅಡಿಯಲ್ಲಿ 48 ವಿಮಾನಗಳು ಭಾರತದಲ್ಲಿ ಬಂದಿಳಿದಿದ್ದು, ಅವುಗಳಲ್ಲಿ ಒಟ್ಟು 18 ವಿಮಾನಗಳು ಕಳೆದ 24 ಗಂಟೆಗಳಲ್ಲಿ ಬಂದಿಳಿದಿವೆ. ಈ 18 ವಿಮಾನಗಳಲ್ಲಿ ಸ್ವದೇಶಕ್ಕೆ ಹಿಂದಿರುಗಿರುವ ಒಟ್ಟು ಭಾರತೀಯರ ಸಂಖ್ಯೆ ಸುಮಾರು 4,000ದಷ್ಟಿದೆ ಎಂದು ಭಾರತ ಸರಕಾರ ತನ್ನ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ನಾಳೆಯ ವಿಮಾನಗಳ ಆಗಮನದ ಕುರಿತು ಮಾಹಿತಿ ಈ ರೀತಿ ಇದ್ದು, ‘ನಿರ್ಗಮನದ ಸ್ಥಳಗಳ ಪ್ರಕಾರ ಹೇಳುವುದಾದರೆ, ಬುಡಾಪೆಸ್ಟ್ನಿಂದ ತಲಾ 5 ವಿಮಾನಗಳು, ರೊಮೇನಿಯಾದ ಸುಸೇವಾದಿಂದ 4 ವಿಮಾನಗಳು, ಪೋಲ್ಯಾಂಡ್ನ ರೆಜ್ಜೋವ್ನಿಂದ 3 ವಿಮಾನಗಳು ಮತ್ತು ವಾರ್ಸಾ, ಬ್ರಾಟಿಸ್ಲಾವಾ (ಹೊಸ ನಿರ್ಗಮನ ಸ್ಥಳ), ಬುಕಾರೆಸ್ಟ್ ಮತ್ತು ಸ್ಲೊವಾಕಿಯಾದ ಕೋಸಿಸ್ನಿಂದ ತಲಾ 1 ವಿಮಾನಗಳು ಇರುತ್ತವೆ’ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.
ಆಪರೇಷನ್ ಗಂಗಾ ಯುದ್ಧ ಪೀಡಿತ ಉಕ್ರೇನ್ಗೆ ಮಾನವೀಯ ನೆರವುಗಳನ್ನು ಒದಗಿಸಲು ಮತ್ತು ಅಲ್ಲಿನ ಯುದ್ಧದ ಪರಿಸ್ಥಿತಿಯ ನಡುವಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರೀಕರನ್ನು ಅಲ್ಲಿಂದ ಸ್ಥಳಾಂತರಿಸಲು ಭಾರತ ಸರಕಾರ ಆರಂಭಿಸಿರುವ ಕಾರ್ಯಾಚರಣೆಯಾಗಿದೆ. ಈಗಾಗಲೇ ಉಕ್ರೇನ್ನಲ್ಲಿ ಇದ್ದ ಸಾವಿರಾರು ಮಂದಿ ಭಾರತೀಯರು ಈ ಕಾರ್ಯಾಚರಣೆಯ ಸಹಾಯದಿಂದ ಸುರಕ್ಷಿತವಾಗಿ ಸ್ವದೇಶ ತಲುಪಿದ್ದಾರೆ.
ಈ ಮೊದಲು, ಮಾನವೀಯ ನೆರವಿನ ನಾಲ್ಕು ಭಾಗಗಳನ್ನು ಕಳುಹಿಸಲಾಗಿತ್ತು ಮತ್ತು ಇಂದು ಭಾರತೀಯ ವಾಯುಪಡೆಯ ವಿಮಾಗಳ ಮೂಲಕ ಇನ್ನೂ ಎರಡು ಭಾಗಗಳನ್ನು ಕಳುಹಿಸಲಾಗಿದೆ (ಪೋಲ್ಯಾಂಡ್ , ಸ್ಲೊವಾಕ್, ರೊಮೇನಿಯಾ) ಎಂದು ಕೇಂದ್ರ ಸರಕಾರವು ದೃಢಪಡಿಸಿದೆ.
ಇಂದು ಒಂದು ಭಾರತೀಯ ವಾಯು ಪಡೆಯ ವಿಮಾನವು 6 ಟನ್ಗಳಷ್ಟು ವಸ್ತುಗಳನ್ನು ರೊಮೇನಿಯಾಕ್ಕೆ ಮತ್ತು ಇನ್ನೊಂದು ವಿಮಾನವು 9 ಟನ್ಗಳಷ್ಟು ವಸ್ತುಗಳನ್ನು ಸ್ಲೊವಾಕಿಯಾಕ್ಕೆ ಸಾಗಿಸಿತು ಎಂದು ಸರಕಾರದ ಪ್ರಕಟನೆ ತಿಳಿಸಿದೆ. ಉಕ್ರೇನಿನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಗಳನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ಮೂರು ದಿನಗಳ ಬಳಿಕ, ರಷ್ಯಾದ ಪಡೆಗಳು ಫೆಬ್ರವರಿ 24 ರಂದು ಉಕ್ರೇನಿನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದವು.