ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಂಚೆ ಮತದಾನ ವ್ಯವಸ್ಥೆ, ಅಥವಾ ಆಯಾ ದೇಶದ ರಾಯಭಾರ ಕಚೇರಿಯಲ್ಲಿ ಮತಗಟ್ಟೆ ತೆರೆಯಬೇಕೆಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸಾಗರೋತ್ತರ ಕನ್ನಡಿಗರು ಸಂಘಟನೆ ಪತ್ರ ಮುಖೇನ ಮನವಿ ಮಾಡಿದೆ.
ಸಾಗರೋತ್ತರ ಕನ್ನಡಿಗರು ಸಂಘಟನೆಯುವ ಕೋವಿಡ್ ಸಾಂಕ್ರಾಮಿಕ ವೇಳೆ ಸ್ಥಾಪಿಸಲಾಗಿದ್ದು, ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಿಗರ ವಿವಿಧ ಸಮಸ್ಯೆಗಳ ನಿವಾರಣೆ, ಕಲ್ಯಾಣದ ಮಹತ್ತರ ಉದ್ದೇಶಗಳನ್ನುಗಳನ್ನು ಹೊಂದಿದೆ. ಯುಕೆಯ ( ಕಮ್ಯುನಿಟಿ ಇಂಟ್ರೆಸ್ಟ್ ಕಂಪನಿ) ನಿಯಮದಡಿ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ.
ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಂಚೆ ಮತದಾನ ವ್ಯವಸ್ಥೆ, ಅಥವಾ ಆಯಾ ದೇಶದ ರಾಯಭಾರ ಕಚೇರಿಯಲ್ಲಿ ಮತಗಟ್ಟೆ ತೆರೆಯಬೇಕೆಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸಂಘಟನೆ ಸ್ಥಾಪಕ ಮತ್ತು ಜಂಟಿ ಕಾರ್ಯದರ್ಶಿ ರವಿ ಮಹಾದೇವ ಪತ್ರ ಮುಖೇನ ಮನವಿ ಮಾಡಿದ್ದಾರೆ.
ನಾವು ವಿದೇಶದಲ್ಲಿ ವಾಸಿಸುತ್ತಿದ್ದರೂ ಭಾರತೀಯ ಸಂಸ್ಕೃತಿ, ಆಚಾರ ವಿಚಾರ, ಮೂಲ ನೆಲೆಯೊಂದಿಗೆ ಸಂಪರ್ಕ ಹೊಂದಿದ್ದೇವೆ. ಅಲ್ಲದೆ ದೇಶದ ಪರಂಪರೆ ಮತ್ತು ಸಂಸ್ಕೃತಿ ವಿದೇಶಗಳಲ್ಲಿಯೂ ಪಸರಿಸುವಂತೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಗತಿಯ ಮೂಲ ಉದ್ದೇಶವಾದ ಮತದಾನ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಗರೋತ್ತರ ಕನ್ನಡಿಗರಿಗೆ ಅವಕಾಶ ಅಗತ್ಯ ಎಂದು ಸಂಘಟನೆ ಮನವಿಯಲ್ಲಿ ವಿವರಿಸಿದೆ.
ಸರಿಸುಮಾರು 6 ಮಿಲಿಯನ್ ಅರ್ಹ ಭಾರತೀಯ ಮತದಾರರು ವಿದೇಶದಲ್ಲಿ ವಾಸಿಸುತ್ತಿದ್ದಾರೆ, ಇವರ ಮತದಾನ ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಅಗತ್ಯ. ಈ ಪೈಕಿ 5 ಲಕ್ಷ ಕನ್ನಡಿಗರು ಮತದಾನಕ್ಕೆ ಅರ್ಹರಾಗಿದ್ದಾರೆ. ಈ ದೃಷ್ಟಿಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಸಂಘಟನೆ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ ಯುಎಇ , ಉಪಾಧ್ಯಕ್ಷ ಗೋಪಾಲ್ ಕುಲಕರ್ಣಿ ಇಂಗ್ಲೆಂಡ್ , ಸಂಘಟನೆ ಕಾರ್ಯದರ್ಶಿ ಹೇಮೆಗೌಡ ಮಧು (ಇಟಲಿ), ಖಜಾಂಚಿ ಬಸವ ಪಾಟೀಲ್ (ಯಕೆ) ಪತ್ರದಲ್ಲಿ ವಿವರಿಸಿದ್ದಾರೆ.