ಪುದುಚೆರಿ: ಫೇಸ್ ಬುಕ್ ಅಕೌಂಟ್ ನಲ್ಲಿ ವ್ಯಕ್ತಿಯೊಬ್ಬ ಯಾರಾದರೂ ಐದು ಕೋಟಿ ರೂಪಾಯಿ ಕೊಟ್ಟರೆ ಪ್ರಧಾನಿ ಮೋದಿ ಅವರನ್ನು ಕೊಲೆ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದು, ಆತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಪುದುಚೆರಿಯ ಆರ್ಯಂಕುಪ್ಪಂ ಗ್ರಾಮದ ನಿವಾಸಿಯಾಗಿರುವ 43 ವರ್ಷದ ಸತ್ಯ ಆನಂದಂ ಈ ಕೃತ್ಯವನ್ನು ಮಾಡಿರುವುದಾಗಿ ತಿಳಿದುಬಂದಿದ್ದು ಇದರ ಬಗ್ಗೆ ಕಾರು ಚಾಲಕನೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ನಂತರ ಪೊಸ್ಟ್ ಕುರಿತಂತೆ ದೂರು ಬಂದ ಮೇಲೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಖಾತೆಯ ಮೂಲ ಪರಿಶೀಲಿಸಿದ್ದಾರೆ.
ಆರೋಪಿಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 505 (1) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಗಳಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದು ಮತ್ತು ವರ್ಗಗಳ ನಡುವೆ ದ್ವೇಷ, ಅಥವಾ ಕೆಟ್ಟ ಇಚ್ಚೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಉದ್ದೇಶದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ