ಹೈದರಾಬಾದ್: ಗುಜರಾತ್ ನಲ್ಲಿರುವ ದೇವಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡುತ್ತಾ ಇರುವುದು ಅಪ್ಪಟ ವೋಟ್ ಬ್ಯಾಂಕ್ ರಾಜಕೀಯ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಟೀಕಿಸಿದರು.
ಗುಜರಾತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರಕ್ಕೆ ಬದಲಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಾ ಇದ್ದರು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ನಡೆದಾಗ ಇಂತಹ ನಾಟಕಗಳು ನಡೆಯುತ್ತಿರುತ್ತದೆ ಎಂದು ಹೈದರಾಬಾದ್ ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಓವೈಸಿ ಅಭಿಪ್ರಾಯಪಟ್ಟರು.
ಚುನಾವಣಾ ಪ್ರಚಾರ ವೇಳೆ ನಾನು ಕೂಡ ಹಸಿರು ಧ್ವಜ ಹಿಡಿದುಕೊಂಡು ಮಸೀದಿ ಮತ್ತು ದರ್ಗಾಗಳಿಗೆ ಭೇಟಿ ನೀಡುತ್ತೇನೆ. ಬಿಜೆಪಿ ನಾಯಕರು ಕೇಸರಿ ಧರಿಸಿದ್ದಾರೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಆದರೆ ನಾನು ಮಾತ್ರ ಹಸಿರು ಧರಿಸುತ್ತೇನೆ ಎಂದರು.