ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫೋರಂ ಮಾಲ್ ನಲ್ಲಿ ನಿನ್ನೆ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಬೆಂಕಿ ಅವಘಡದಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಗೀತ ಕಾರ್ಯಕ್ರಮ ವೇಳೆ ಅರ್ಜುನ್ ಜನ್ಯ ಬೈಕಿನಲ್ಲಿ ವೇದಿಕೆಗೆ ಬರಬೇಕಾಗಿತ್ತು. ಈ ಬೈಕ್ ನ ಹಿಂಬದಿಗೆ ಪಟಾಕಿ ಕಟ್ಟಿದ್ದರು. ಇದು ಸಿಡಿದು ಅರ್ಜುನ್ ಜನ್ಯ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಅರ್ಜುನ್ ಜನ್ಯ ಪ್ರಥಮ ಚಿಕಿತ್ಸೆ ಪಡೆದುಕೊಂಡ ಬಳಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಾರ್ಯಕ್ರಮ ಕೊನೆಗೊಂಡ ಬಳಿಕ ಇಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.