ವಡೋದರ, (ಗುಜರಾತ್): ಮೂರು ತಿಂಗಳ ಹಿಂದೆಯೇ ಭಾರತೀಯ ಮೀನುಗಾರರೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಮೃತಪಟ್ಟಿದ್ದು ಈ ವಿಚಾರ ಮೃತನ ಕುಟುಂಬಿಕರಿಗೆ ಈಚೆಗಷ್ಟೇ ತಿಳಿದಿದೆ.
ಪಾಕ್ ನ ಜೈಲಿನಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗುಜರಾತ್ ರಾಜ್ಯದ ಸೋಮನಾಥ್ ಜಿಲ್ಲೆಯ ಕೋಟಾಡಾ ಗ್ರಾಮದ ದೇವರಾಮ ಬರಯ್ಯ (55) ಎಂದು ಗುರುತಿಸಲಾಗಿದೆ.
ಅವರಬ್ಬು ಫೆ.೨ರಂದು ಪಾಕಿಸ್ತಾನದ ಕಡಲ ಗಸ್ತು ಸಂಸ್ಥೆಯ ಅಧಿಕಾರಿಗಳು ಬಂಧಿಸಿ ಕರಾಚಿ ಜೈಲಿನಲ್ಲಿ ಇರಿಸಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಆದರೆ, ಮಾರ್ಚ್ 4ರಂದು ಬರಯ್ಯ ಮೃತಪಟ್ಟಿದ್ದರು. ಜೈಲಿನಲ್ಲಿ ಜೊತೆಗಿದ್ದ ಅವರ ಸಹೋದರನ ಅಳಿಯ ಪ್ರವೀಣ್ ಧನ್ ಸುಖ್ ಚಾವ್ಡಾ ಈ ಕುರಿತು ಏಪ್ರಿಲ್ 22ರಂದು ಕುಟುಂಬದ ಸದಸ್ಯರಿಗೆ ಪತ್ರ ಬರೆದಿದ್ದಾನೆ.
ಆದರೆ ಮೃತಪಟ್ಟ ವಿಚಾರ ಬರಯ್ಯ ಅವರ ಪತ್ನಿ ಕಸ್ತೂರಿಬೆನ್ ಈಚೆಗೆ ತಿಳಿದಿದೆ. ಮೀನುಗಾರನ ಸಾವಿನ ಬಗ್ಗೆ ಭಾರತದ ಅಧಿಕಾರಿಗಳಿಗೆ ಮಾಹಿತಿ ನೀಡದ ಪಾಕಿಸ್ತಾನದ ಕ್ರಮವನ್ನು ಗುಜರಾತ್ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವೆಲ್ಜಿಬಾಯಿ ಮಸಾನಿ ಖಂಡಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಲ್ಲಿ ಮನವಿ ಮಾಡಿದ್ದಾರೆ.
ಕಸ್ತೂರಿಬೆನ್ ಕೂಲಿ ಕೆಲಸ ಮಾಡುತ್ತಿದ್ದು, ಈ ದಂಪತಿಗೆ ಆರು ಮಕ್ಕಳಿದ್ದಾರೆ.