ನವದೆಹಲಿ: ಬಿನ್ ಲಾಡೆನ್ ಎಂದೇ ಕುಖ್ಯಾತಿ ಪಡೆದ ಗುಜರಾತ್ ಸರಣಿ ಬಾಂಬ್ ಸ್ಫೋಟದ ರೂವಾರಿ ಉಗ್ರಗಾಮಿ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಎಟಿಎಸ್ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಖುರೇಷಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖುರೇಷಿ ಅಲಿಯಾಸ್ ತೌಖೀರ್ ರಾಷ್ಟ್ರೀಯ ತನಿಖಾ ದಳ ಎನ್ ಐಎಗೆ ಕೂಡ ಬೇಕಾದ ವ್ಯಕ್ತಿಯಾಗಿದ್ದಾನೆ ಎಂದು ತಿಳಿದುಬಂದಿದೆ.
2008ರ ಜುಲೈ 26ರಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಸಿದ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿದ್ದ. ಅದಲ್ಲದೆ 2006ರಲ್ಲಿ ನಡೆದಿದ್ದ ಮುಂಬೈ ಲೋಕಲ್ ರೈಲು ಬಾಂಬ್ ಸ್ಫೋಟ ಪ್ರಕರಣದಲ್ಲೂ ಖುರೇಷಿ ಕೈವಾಡವಿತ್ತು ಎಂದು ಪೊಲೀಸರಿಗಿತ್ತು. ಇನ್ನೂ ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟದ ಜವಾಬ್ದಾರಿ ಹಾಗೂ ಅಲ್-ಅರಬಿ ಇ-ಮೇಲ್ ಖಾತೆಗೂ ಬಂಧಿತ ಖುರೇಷಿಗೂ ಸಂಬಂಧವಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದಲ್ಲದೆ ಖುರೇಷಿ 2006ರಲ್ಲಿ ದೆಹಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದಿದ್ದ ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಈ ಎಲ್ಲ ಪ್ರಕರಣಗಳಲ್ಲಿ ಬಾಗಿಯಾಗಿದ್ದ ಖುರೇಷಿ ತನ್ನ ವೇಷವನ್ನು ಬದಲಾಯಿಸಿಕೊಂಡು ಸುತ್ತಾಡುತ್ತಿದ್ದು, ಇದರಿಂದ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ.