ಲಡಾಖ್: ಕಳೆದ ಕೆಲ ತಿಂಗಳನಿಂದ ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ತನ್ನ ಸೇನಾ ಜಮಾವಣೆಯನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದು ಕಳವಳಕಾರಿ ಬೆಳವಣಿಗೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜ.ಎಂ.ಎಂ.ನರವಣೆ ಹೇಳಿದ್ದಾರೆ. ಆದರೆ ಇದೇ ವೇಳೆ, ನಾವು ಕೂಡಾ ಅವರಿಗೆ ಸಮನಾದ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧ ಎಂದು ಹೇಳುವ ಮೂಲಕ ಚೀನಾಕ್ಕೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ಪೂರ್ವ ಲಡಾಖ್ನಲ್ಲಿನ ಸೇನೆಯ ಸನ್ನದ್ಧ ಸ್ಥಿತಿ ಪರಿಶೀಲನೆಗಾಗಿ ಆಗಮಿಸಿದ್ದ ವೇಳೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನರವಣೆ, ‘ಪೂರ್ವ ಲಡಾಖ್ ಮತ್ತು ಉತ್ತರ ಭಾಗದಲ್ಲಿ ಚೀನಾ ಸೇನೆ ಗಮನಾರ್ಹ ಪ್ರಮಾಣದಲ್ಲಿ ಸೇನಾ ನಿಯೋಜನೆ ಹೆಚ್ಚಿಸಿದೆ. ಮುಂಚೂಣಿ ನೆಲೆಗಳಲ್ಲಿ ಅವರ ಸೇನೆ ಜಮಾವಣೆ ಪ್ರಮಾಣ ಹೆಚ್ಚಳ, ಸಹಜವಾಗಿಯೇ ನಮಗೆ ಕಳವಳದ ವಿಷಯ. ಆದರೆ ಕಳೆದ 6 ತಿಂಗಳಿನಿಂದ ಗಡಿಯಲ್ಲಿ ಪರಿಸ್ಥಿತಿ ಸಹಜವಾಗಿದೆ’.
‘ನಾವು ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮಗೆ ಏನೆಲ್ಲಾ ಮಾಹಿತಿಗಳು ಲಭ್ಯವಾಗುತ್ತಿವೆಯೋ ಅದನ್ನು ಆಧರಿಸಿ ನಾವು ಕೂಡಾ ಅದಕ್ಕೆ ಸಮನಾದ ಮೂಲಸೌಕರ್ಯ, ಸೇನಾ ಜಮಾವಣೆ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ ಹಂತದಲ್ಲಿ ನಾವು ನಮಗೆ ಎದುರಾಗಬಹುದಾದ ಯಾವುದೇ ಪರಿಸ್ಥಿತಿ ಎದುರಿಸಲು ಫäರ್ಣ ಸಜ್ಜಾಗಿದ್ದೇವೆ. ಆದರೆ ಯಾವುದೇ ಪ್ರದೇಶದಲ್ಲಿ ನಮ್ಮ ವಿರುದ್ಧ ಆಕ್ರಮಣಶೀಲ ನಡತೆ ತೋರುವ ಬಗ್ಗೆ ಅನುಮಾನವಿದೆ’ ಎಂದು ಹೇಳಿದ್ದಾರೆ.
ಕಳೆದ ವರ್ಷ ಪೂರ್ವ ಲಡಾಖ್ನಲ್ಲಿ ಚೀನಾ ಯೋಧರು, ಭಾರತದ ಕಣ್ಗಾವಲಿಗೆ ಒಳಪಟ್ಟಪ್ರದೇಶವನ್ನು ಪ್ರವೇಶಿಸಿ ಸಂಘರ್ಷಕ್ಕೆ ಕಾರಣವಾಗಿದ್ದರು. ಈ ವೇಳೆ ಉಭಯ ಸೇನೆಗಳ ನಡುವೆ ನಡೆದ ಮುಷ್ಠಿಕಾಳಗದಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿ, ಅದು ಭಾರೀ ಮುಖಭಂಗ ಎದುರಿಸಿತ್ತು. ನಂತರದಲ್ಲಿ ಉಭಯ ದೇಶಗಳು ಲಕ್ಷಾಂತರ ಸಂಖ್ಯೆಯಲ್ಲಿ ಯೋಧರು, ಅತ್ಯಾಧುನಿಕ ಶಸ್ತ್ರಾಸ್ತ್ರ ನಿಯೋಜಿಸಿದ್ದವು. ಹೀಗಾಗಿ ಇನ್ನೇನು ಯುದ್ಧ ನಡೆದೇ ಹೋಯ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ಬಳಿಕ ಹಂತಹಂತವಾಗಿ ಸೇನಾ ವಾಪಸಾತಿ ಬಗ್ಗೆ ಎರಡೂ ದೇಶಗಳು ಒಪ್ಪಿದ್ದವು. ಆದರೆ ಒಂದೆಡೆ ಸೇನೆ ಹಿಂದಕ್ಕೆ ಕರೆಸಿಕೊಂಡಂತೆ ಮಾಡುತ್ತಿರುವ ಚೀನಾ, ಮತ್ತೊಂದು ಪ್ರದೇಶದಲ್ಲಿ ಸೇನಾ ಜಮಾವಣೆ ಹೆಚ್ಚಿಸುವ ಮೂಲಕ ತನ್ನ ಕುಠಿಲ ಬುದ್ದಿ ಪ್ರದರ್ಶಿಸುತ್ತಿದೆ .