ಬಳ್ಳಾರಿ: ಕೈಗಾರಿಕೆ ಘಟಕಗಳ ಸ್ಥಾಪನೆಗೆ ವಿವಿಧ ಕಂಪನಿಗಳ ಮಾಲೀಕರು ಭೂಮಿ ಪಡೆದು 10ವರ್ಷ ಕಳೆದರೂ ಕಾರ್ಯಾಚರಣೆ ಪ್ರಾರಂಭವಾಗಿಲ್ಲ, ಈ ಕುರಿತು ಚೆರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗಳ ಮಾಲೀಕರು ಪಡೆದ ಜಮೀನನ್ನು ಅದೇ ಉದ್ದೇಶಕ್ಕಾಗಿ ಬಳಸಬೇಕು, ಅದೂ ನಿಗಧತ ಅವಧಿಯಲ್ಲಿ ಕಾರ್ಯಾರಂಭ ಮಾಡಬೇಕು, ಕೆಲ ಕಂಪನಿಗಳ ಮಾಲೀಕರು ಭೂಮಿ ಪಡೆದು ಹತ್ತು ವರ್ಷಗಳ ಕಳೆದರೂ ಕಾರ್ಯಾರಂಭ ಮಾಡಿಲ್ಲ, ಈ ಕುರಿತು ಚೆರ್ಚಿಸಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ವ್ಯರ್ಥವಾಗಿ ಸಮುದ್ರ ಪಾಲಾಗುತ್ತಿದ್ದು, ಈ ನೀರನ್ನು ಸಂಗ್ರಹಿಸಿ ಬಳಸಬೇಕು ಎನ್ನುವ ಉದ್ದೇಶದಿಂದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನಿಲುವು ಗೊತ್ತಿರುವ ವಿಚಾರವಾಗಿದೆ. ಇದನ್ನೇ ಕೆಲವರು ರಾಜಕೀಯ ಬಣ್ಣ ಲೇಪಿಸಲು ಮುಂದಾಗಿದ್ದಾರೆ, ಇದು ಸರಿಯಲ್ಲ, ಈ ಯೋಜನೆ ಮಾಡುವುದು ತಮಿಳುನಾಡು ಕೈಯಲ್ಲಿಲ್ಲ, ನಮ್ಮ ಕೈಯಲ್ಲಲ್ಲಿದೆ ಇದಕ್ಕೆ ನಾವು ಬದ್ಧರಾಗಿದ್ದೇವೆ, ಮೇಕೆದಾಟು ಯೋಜನೆ ವಿಚಾರದಲ್ಲಿ ನಮ್ಮ ನಿಲುವು ಬದಲಾಗೋಲ್ಲ, ತಮಿಳುನಾಡಿಗೆ ಯಾವುದೇ ತೀರ್ಮಾನ ಮಾಡಲು ಅಧಿಕಾರವಿಲ್ಲ, ಕಾನೂನಾತ್ಮಕ ಹೋರಾಟದಿಂದ ಮೇಕೆದಾಟು ಯೋಜನೆ ಆಗಲಿದೆ ಎಂದು ಹೇಳಿದರು. ಭಾನುವಾರ ಕೋರ್ ಕಮಿಟಿ ಸಭೆ ನಡೆಯಲಿದ್ದು, ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇವತ್ತೇ ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಸೋಮಶೇಖರ್ ರೆಡ್ಡಿ, ಸೋಮಲಿಂಗಪ್ಪ, ಶಶೀಲ್ ನಮೋಶಿ, ಬುಡಾ ಅಧ್ಯಕ್ಷ ಪಾಲನ್ನ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಇತರರು ಇದ್ದರು.