ಮುಂಬೈ: ಆರ್ಸಿಬಿ ಸೋಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ನೇರಾ ಕಾರಣ ತಿಳಿಸಿದ್ದಾರೆ. ನಮ್ಮ ತಂಡದಲ್ಲಿ ಸಾಕಷ್ಟು ಬೌಲಿಂಗ್ ಅಸ್ತ್ರಗಳಿಲ್ಲ. ಹಾಗಾಗಿ, ನಮ್ಮ ಬ್ಯಾಟರ್ಗಳು ಹೆಚ್ಚು ರನ್ ಗಳಿಸಬೇಕು ಎಂದು ಫಫ್ ಡುಪ್ಲೆಸಿ ಹೇಳಿದ್ದಾರೆ. ಬೌಲಿಂಗ್ ವಿಭಾಗದ ದೌರ್ಬಲ್ಯವನ್ನು ಬ್ಯಾಟರ್ಗಳು ತುಂಬಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಬ್ಯಾಟಿಂಗ್ಗೆ ಸಂಬಂಧಿಸಿದಂತೆ ಹೇಳುವುದಾದರೆ, ನಾವು 200ಕ್ಕೂ ಹೆಚ್ಚು ರನ್ ಗಳಿಸಬೇಕಿದೆ. ನಮ್ಮ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಅಸ್ತ್ರಗಳಿಲ್ಲದ ಕಾರಣ ಅದರ ಒತ್ತಡ ಬ್ಯಾಟಿಂಗ್ ಮೇಲೆ ಬೀಳುತ್ತದೆ.
‘ಬೌಲಿಂಗ್ ವಿಭಾಗದ ಕುರಿತಂತೆ ಹೇಳುವುದಾದರೆ, ಆರಂಭದಲ್ಲಿ ವಿಕೆಟ್ ತೆಗೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಪವರ್ಪ್ಲೇಯಲ್ಲಿ ನಾವು ಎರಡು ಅಥವಾ ಮೂರು ವಿಕೆಟ್ ಪಡೆಯಬೇಕು. ಮೊದಲ 4 ಓವರ್ಗಳಲ್ಲಿ ನಾವು ಬಹಳ ಹಿಂದೆ ಉಳಿಯುತ್ತಿದ್ದೇವೆ.
‘ಈ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ. ಟಾಸ್ ಗೆದ್ದಿದ್ದರೆ ಅದರ ವಿಷಯ ಬೇರೆ ಆಗಿರುತ್ತಿತ್ತು. ಮುಂಬೈ ಬ್ಯಾಟರ್ಗಳು ಆಕ್ರಮಕಾರಿ ಆಟದ ಮೂಲಕ ನಮ್ಮ ಬೌಲರ್ಗಳು ಬಹಳಷ್ಟು ತಪ್ಪುಗಳನ್ನು ಮಾಡುವಂತೆ ನೋಡಿಕೊಂಡರು’ ಎಂದಿದ್ದಾರೆ.
‘ನಮಗೆ 215-220 ರನ್ ಅಗತ್ಯವಿತ್ತು. 190 ಸಾಕಾಗಲಿಲ್ಲ. ಇಬ್ಬನಿಯು ಸಹ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿತ್ತು. ಹಲವೆಡೆ ಒದ್ದೆಯಾದ ಮೈದಾನ ಪಂದ್ಯದ ಗತಿ ಬದಲಿಸಿದೆ. ನಾವು ಚೆಂಡನ್ನು ಹಲವು ಬಾರಿ ಬದಲಾಯಿಸಿದ್ದೇವೆ’ಎಂದು ಅವರು ತಿಳಿಸಿದ್ದಾರೆ.
ಇತ್ತ ಆರ್ಸಿಬಿ ಮ್ಯಾನೇಜ್ಮೆಂಟ್ ಪಂದ್ಯದಿಂದ ಪಂದ್ಯಕ್ಕೆ ಮಾಡುತ್ತಿರುವ ತಪ್ಪುಗಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಹೀಗೆ ಮುಂದುವರೆದರೆ ಆರ್ಸಿಬಿ ಪ್ಲೇ ಆಫ್ ಹಂತ ತಲುಪುವುದು ಅಸಾಧ್ಯವೆನಿಸಲಿದೆ.
ಪ್ರಸಕ್ತ ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡ ಬಲಿಷ್ಠ ಆಡುವ 11ರ ಬಳಗವನ್ನೇ ಕಣಕ್ಕಿಳಿಸಿಲ್ಲ, ಅಸಲಿಯಾಗಿ ಬಲಿಷ್ಠ ತಂಡವೇ ಇಲ್ಲ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನೇ ಇಡೀ ತಂಡ ನೆಚ್ಚಿಕೊಂಡಿದೆ. ಕೊಹ್ಲಿ ಆಡಿದರೆ ರನ್ಗಳು ಬರುತ್ತವೆ, ಇಲ್ಲದಿದ್ದರೆ ಕನಿಷ್ಠ 100ರ ಗಡಿ ಸಹ ತಲುಪುವುದಿಲ್ಲ. ಬಿಗ್ ಹಿಟ್ಟರ್ಗಳು ಎಂದು ಹೆಸರು ಗಳಿಸಿರುವ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿಯ ಐಪಿಎಲ್ನಲ್ಲಿ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದ್ದರೆ, ಬೌಲಿಂಗ್ ವಿಭಾಗವಂತೂ ಅತಿ ಕೆಟ್ಟದಾಗಿದೆ.
ಆರ್ಸಿಬಿ ತಂಡದ ಅಭಿಮಾನಿಯಾಗಲಿ ಅಥವಾ ಕ್ರಿಕೆಟ್ ಪ್ರೇಮಿಯಾಗಲಿ ಆರ್ಸಿಬಿ ಯಾವೊಬ್ಬ ಬೌಲರ್ ಮೇಲೆ ನಂಬಿಕೆ ಇಡಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ದುಬಾರಿಯಾಗುತ್ತಿದ್ದಾರೆ ಮತ್ತು ವಿಕೆಟ್ ರಹಿತರಾಗುತ್ತಿದ್ದಾರೆ.
ಆಡಿದ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಜಯ್ಕುಮಾರ್ ವೈಶಾಕ್ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುತ್ತಿಲ್ಲ. 17.50 ಕೋಟಿ ರೂಪಾಯಿ ಕೊಟ್ಟು ವ್ಯಾಪಾರ ಮಾಡಿಕೊಂಡಿರುವ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಈವರೆಗೆ ಒಂದೇ ಒಂದು ಹೇಳಿಕೊಳ್ಳುವ ಆಟ ಆಡಿಲ್ಲ. ಬ್ಯಾಟಿಂಗ್ನಲ್ಲಿಯೂ ಅಬ್ಬರಿಸುತ್ತಿಲ್ಲ ಮತ್ತು ಬೌಲಿಂಗ್ನಲ್ಲಿ ದುಬಾರಿ. ಇಂತಹ ಆಟಗಾರ ತಂಡಕ್ಕೆ ಬೇಕಿತ್ತಾ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಕ್ಯಾಮೆರಾನ್ ಗ್ರೀನ್ಗೆ ಕೊಡುವ ಮೊತ್ತದಲ್ಲಿ 3-4 ಭಾರತೀಯ ಆಟಗಾರರು ಸಿಗುತ್ತಿದ್ದರು ಎಂದು ಟೀಕಿಸುತ್ತಿದ್ದಾರೆ.
ಮೊದಲೇ ಐಪಿಎಲ್ ಹರಾಜಿನಲ್ಲಿ ಪ್ರತಿಭಾವಂತ ಆಟಗಾರರನ್ನು ಬಿಟ್ಟು ದೊಡ್ಡ ಹೆಸರುಗಳಿಗೆ ಮಾತ್ರ ಗಾಳ ಹಾಕುವ ಆರ್ಸಿಬಿ, ಈ ಬಾರಿಯೂ ಫಾರ್ಮ್ನಲ್ಲಿಲ್ಲದ ಆಟಗಾರರನ್ನು ಗುಡ್ಡೆ ಹಾಕಿಕೊಂಡಿದೆ.
ಸರಿಯಾದ ಬೌಲರ್ ಗಳನ್ನು ಆಯ್ಕೆ ಮಾಡಿಕೊಂಡಿಲ್ಲ ಎಂಬುದು ಅಭಿಮಾನಿಗಳ ಮಾತು.