ಕಲಬುರಗಿ: ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ಮನೀಷ್ ಸುರೇಶ್ಕುಮಾರ್ ಹಾಗೂ ರಿಷಭ್ ಅಗರವಾಲ್ ರೋಚಕ ಜಯ ದಾಖಲಿಸಿ, ಕಲಬುರಗಿ ಓಪನ್ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ಗುರುವಾರ ಭಾರತದ ಮನೀಷ್ ಸುರೇಶ್ಕುಮಾರ್ 6-1, 6-0ಯಿಂದ ಸ್ವದೇಶದ ಆಟಗಾರ ಭರತ್ ನಿಶೋಕ್ ಕುಮಾರನ್ ಅವರನ್ನು ಪರಾಭವಗೊಳಿಸಿದರು.
ವೇಗದ ಸರ್ವ್ ಮತ್ತು ತಾಂತ್ರಿಕ ನೈಪುಣ್ಯದ ನೆರವಿನಿಂದ ಮನೀಷ್ ಅವರು ಕೇವಲ ಒಂದು ಗೇಮ್ ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟು, ಮೊದಲ ಸೆಟ್ ಜಯಿಸಿದರು. ಆದರೆ, ಎರಡನೇ ಸೆಟ್ನಲ್ಲಿ ಏಕಪಕ್ಷೀಯ ಜಯ ಸಾಧಿಸಿದರು. ಈ ಹಂತದಲ್ಲಿ ಅವರು ಎರಡು ಏಸ್ಗಳನ್ನು ಸಿಡಿಸಿದರೆ, 31 ಸರ್ವಿಸ್ ಪಾಯಿಂಟ್ಸ್ ಗಳಿಸಿದರು.
ಇನ್ನೊಂದು ಪಂದ್ಯದಲ್ಲಿ ರಿಷಭ್ ಅಗರವಾಲ್ 6-1, 7-6 (1)ರಿಂದ ಕರ್ನಾಟಕದ ಮನೀಷ್ ಗಣೇಶ್ ಅವರನ್ನು ಮಣಿಸಿದರು. ಮೊದಲ ಸೆಟ್ ಸುಲಭವಾಗಿ ಕೈಚೆಲ್ಲಿದ ಮನೀಷ್, ಎರಡನೇ ಸೆಟ್ನಲ್ಲಿ ಕೊಂಚ ಹೋರಾಟ ತೋರಿದರು. ಆದರೆ, ಗೆಲುವು ಒಲಿಯಲಿಲ್ಲ. ಟೈಬ್ರೇಕರ್ನಲ್ಲಿ ಫಲಿತಾಂಶ ನಿರ್ಧಾರವಾಯಿತು.