ಅಹಮದಾಬಾದ್: ಈ ಬಾರಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಬದ್ಧವೈರಿಗಳ ಕಾಳಗಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಅಕ್ಟೋಬರ್ 14 ರಂದು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಕ್ರಿಕೆಟ್ ಲೋಕದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವೆಂದರೇ ಅದಕ್ಕೆ ಬೇರೆಯದ್ದೇ ಆದ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ವಿಶ್ವಕಪ್ ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ. ಹೀಗಾಗಿ ಈ ಪಂದ್ಯವನ್ನು ಮತ್ತಷ್ಟು ವಿಶೇಷಗೊಳಿಸುವ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ, ಈ ಪಂದ್ಯ ಆರಂಭವಾಗುವುದಕ್ಕೂ ಮುನ್ನ ದೇಶದ ಸ್ಟಾರ್ ಕಲಾವಿದರ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ.
ಬಿಸಿಸಿಐ ಈ ಪಂದ್ಯಕ್ಕೂ ಮುನ್ನ ನಡೆಯಲ್ಲಿರುವ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿರುವ ಕಲಾವಿದರ ಹೆಸರನ್ನು ಸಹ ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಬಿಸಿಸಿಐ, ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ವಿಶೇಷ ಪ್ರದರ್ಶನ ನೀಡಲಿದೆ ಎಂದು ಹೇಳಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆಯುವ ಈ ಕಾರ್ಯಕ್ರಮ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1:30ಕ್ಕೆ ಟಾಸ್ ನಡೆಯಲಿದ್ದು, 2 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಪಂದ್ಯದ ಪೂರ್ವ ಶೋನಲ್ಲಿ ಅರಿಜಿತ್ ಸಿಂಗ್ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. . ಅರಿಜಿತ್ ಅವರ ಹೊರತಾಗಿ, ಶಂಕರ್ ಮಹಾದೇವನ್ ಮತ್ತು ಪಂಜಾಬಿ ಗಾಯಕ ಸುಖ್ವಿಂದರ್ ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಇನ್ನು ಭಾರತ-ಪಾಕ್ ನಡುವಿನ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಕ್ಕೆ ಗುಜರಾತ್ ಪೊಲೀಸರು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಆರ್ಎಫ್ ಹೋಮ್ ಗಾರ್ಡ್ಸ್ ಸೇರಿದಂತೆ ಬರೊಬ್ಬರಿ 11,000ಕ್ಕೂ ಅಧಿಕ ಭಧ್ರತಾ ಸಿಬ್ಬಂದಿಯನ್ನು ಈ ಪಂದ್ಯಕ್ಕೆ ನಿಯೋಜಿಸಲಾಗಿದೆ. ಭಾರಿ ರಕ್ಷಣಾ ಸಿಬ್ಬಂದಿಯ ಸರ್ಪಗಾವಲಿನಲ್ಲಿ 1.32 ಲಕ್ಷ ಪ್ರೇಕ್ಷಕರ ನಡುವೆ ಈ ರೋಚಕ ಕದನ ಜರುಗಲಿದೆ ಎಂಬುದು ವಿಶೇಷ. ಬೆದರಿಕೆ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ ಕಳೆದ 20 ವರ್ಷಗಳಲ್ಲಿ ಅಹ್ಮದಾಬಾದ್ನಲ್ಲಿ ನಡೆದ ಕ್ರಿಕೆಟ್ ಪಂದ್ಯಗಳಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಅಹ್ಮದಾಬಾದ್ ಮತ್ತು ಕ್ರೀಡಾಂಗಣ ಸೇರಿದಂತೆ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಹ್ಮದಾಬಾದ್ ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಮಾಹಿತಿ ನೀಡಿದ್ದಾರೆ.
ಇನ್ನು ಇತ್ತಿಚೇಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಹಿಂದಿಯಲ್ಲಿ ಮೇಲ್ ಮಾಡಿದ್ದ ಆರೋಪಿ ಯುವಕ, ಅಕ್ಟೋಬರ್ 10ರಂದು ಸ್ಟೇಡಿಯಂ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಅಂದು ಎಲ್ಲರೂ ನಡುಗುವಂತಹ ಸ್ಪೋಟಕ ಘಟನೆ ನಡೆಯಲಿದೆ ಎಂದು ಬೆದರಿಸಿದ್ದ. ಕೂಡಲೇ ದೂರು ನೀಡಿದ್ದ ಬಿಸಿಸಿಐ ಅಧಿಕಾರಿಗಳು, ಅಹಮದಾಬಾದ್ ಅಪರಾಧ ದಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಐಪಿಸಿ ಸೆಕ್ಷನ್ 505, 506ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾಜ್ಕೋಟ್ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಒಂದು ವಾರದ ಹಿಂದೆ ಖಲಿಸ್ತಾನಿ ಉಗ್ರ ಹಾಗೂ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಸಹ ಅಹಮದಾಬಾದ್ ಸ್ಟೇಡಿಯಂ ಮೇಲೆ ದಾಳಿ ನಡೆಸುವುದಾಗಿ ವಿಡಿಯೋ ಹರಿಯಬಿಟ್ಟಿದ್ದ. ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಭಾರಿ ಬಿಗಿ ಭದ್ರತೆ ನೀಡಲಾಗಿದೆ.
Kickstarting the much-awaited #INDvPAK clash with a special performance! 🎵
Brace yourselves for a mesmerising musical special ft. Arijit Singh at the largest cricket ground in the world- The Narendra Modi Stadium! 🏟️
Join the pre-match show on 14th October starting at 12:30… pic.twitter.com/K6MYer947D
— BCCI (@BCCI) October 12, 2023