ಚಿಕ್ಕಮಗಳೂರು: ಮನುಷ್ಯ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕಾದರೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಎಪಿಎಂಸಿ ಯಾರ್ಡ್ ಸಮೀಪದ ಪ್ಲಾಂಟರ್ ಪಾರ್ಕ್ಸ್ ಶೆಟಲ್ ಬ್ಯಾಡ್ಮಿಂಟನ್ ಅಕಾಡೆಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲ ರೀತಿಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಇಂತಹ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬೇಕಾದರೇ ಯಾವುದಾದರೂ ಕ್ರೀಡೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವಂತರಾಗುವುದರೊಂದಿಗೆ ದೈಹಿಕವಾಗಿಯೂ ಸದೃಢವಾಗಿರಲು ಸಾಧ್ಯವಾಗುತ್ತದೆ ಎಂದರು.
ಆಧುನಿಕ ಜೀವನ ಪದ್ಧತಿಯಿಂದ ಮನುಷ್ಯ ಪ್ರತಿನಿತ್ಯ ಒತ್ತಡದಲ್ಲಿ ಜೀವನ ನಡೆಸುವಂತಾಗಿದೆ. ಮಾನಸಿಕ ಒತ್ತಡದಿಂದ ಹೊರಬರಲು ಕೆಲವರು ದುಶ್ಚಟಗಳಿಗೆ ದಾಸ ರಾಗುತ್ತಾರೆ ಇದು ಸರಿಯಾದ ಮಾರ್ಗವಲ್ಲ. ಒತ್ತಡ ಜೀವನದಿಂದ ಹೊರಬರ ಬೇಕಾದರೇ ಪ್ರತಿದಿನ ಎರಡು ಗಂಟೆಗಳ ಕಾಲ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಾಮಾನ್ಯ ಎರಡನ್ನು ಸಮಾನವಾಗಿ ಸ್ವೀಕರಿಸಿ ಗೆದ್ದವರು ಬಿಗದೆ ಸೋತವರು ಭಾಗದೆ ಮುಂದೆ ಗೆಲ್ಲುವ ವಿಶ್ವಾಸದೊಂದಿಗೆ ಭಾಗವಹಿಸುವಂತೆ ತಿಳಿಸಿದರು.
ಡಾ|ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬರು ದೈಹಿಕ ಮತ್ತು ಮಾನಿಸಿಕವಾಗಿ ಸದೃಡರಾಗಬೇಕಾದರೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅತಿಮುಖ್ಯ ಎಂದ ಅವರು, ಸ್ಫರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಕ್ರೀಡಾ ಸ್ಫೂರ್ತಿ ಮೆರೆಯಬೇಕೆಂದು ಹೇಳಿದರು.
ಪ್ಲಾಂಟರ್ಸ್ ಪಾರ್ಕ್ಸ್ ಶೆಟಲ್ ಬ್ಯಾಡ್ಮಿಂಟನ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೆ.ಎನ್.ಪ್ರಭಾಕರ್ ಪ್ರಸ್ತಾವಿಕವಾಗಿ ಮಾತನಾಡಿ, ಅಕಾಡೆಮಿಯನ್ನು ನಾಲ್ಕು ವರ್ಷ ಗಳ ಹಿಂದೆ ಆರಂಭಿಸಿದ್ದು, ಬಳಿಕ ಕೋವಿಡ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಕಾಡೆಮಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಸದ್ಯ ಕೋವಿಡ್ ಕಡಿಮೆಯಾಗಿದ್ದು, ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಕಾಡೆಮಿಯಲ್ಲಿ ೧೧೫ ಸದಸ್ಯರಿದ್ದು, ಈ ಹಿಂದೆ ಕ್ಲಬ್ ಬ್ಯಾಡ್ಮಿಂಟನ್, ಓಪನ್ ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಪಂದ್ಯಾವಳಿಯನ್ನು ನಡೆಸಲಾಗಿತ್ತು. ಈಗ ಜಿಲ್ಲಾ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಶೆಟಲ್ ಬ್ಯಾಡ್ಮಿಂಟನ್ ಆರೋಗ್ಯವಂತ ಕ್ರೀಡೆಯಾಗಿದ್ದು, ಈ ಆಟದಲ್ಲಿ ತೊಡಗಿಸಿ ಕೊಂಡವರ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯವಂತ ವ್ಯಾಯಾಮವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮ ಡಿಎಫ್ಓ ಪ್ರಭಾಕರ್, ಅಕಾಡೆಮಿಯ ವೆಲಪ್ಪನ್ ಅರುಣ ಸೇರಿದಂತೆ ಅನೇಕರು ಇದ್ದರು.