ದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ಗಳಿಂದ ಬಗ್ಗು ಬಡಿದು ಆರ್ಸಿಬಿ ಕಿರೀಟ ಮುಡಿಗೇರಿಸಿಕೊಂಡಿದೆ.
ಇತ್ತ ಆರ್ಸಿಬಿ ತಂಡ ಗೆಲ್ಲುತ್ತಿದ್ದಂತೆ, ಅತ್ತ ಸಂಭ್ರಮಿಸಿದವರಲ್ಲಿ ಯುಜ್ವೇಂದ್ರ ಚಹಲ್ ಕೂಡ ಒಬ್ಬರು. ಆದರೆ ಚಹಲ್ ಅವರದ್ದು ಕೇವಲ ಸಂಭ್ರಮವಾಗಿರಲಿಲ್ಲ. ಅದು ಪರಮಾನಂದವಾಗಿತ್ತು. ಇದನ್ನು ಟೀಮ್ ಇಂಡಿಯಾ ಆಟಗಾರ ಕನ್ನಡದಲ್ಲೇ ತಿಳಿಸಿದ್ದು ವಿಶೇಷ.
ಹೌದು, ಆರ್ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಯುಜ್ವೇಂದ್ರ ಚಹಲ್ ತಮ್ಮ ಎಕ್ಸ್ ಖಾತೆಯಲ್ಲಿ ಆರ್ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಕನ್ನಡದಲ್ಲೇ “ಆನಂದ.. ಪರಮಾನಂದ…. ಪರಮಾನಂದ….” ಎಂದು ಬರೆದುಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಮಾಜಿ ಆರ್ಸಿಬಿ ಆಟಗಾರನ ಅಭಿಮಾನಕ್ಕೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಜ್ವೇಂದ್ರ ಚಹಲ್ 2014 ರಿಂದ 2021 ರವರೆಗೆ ಆರ್ಸಿಬಿ ಪರ ಆಡಿದ್ದರು. 7 ಸೀಸನ್ಗಳಲ್ಲಿ 50 ಪಂದ್ಯಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಚಹಲ್ ಒಟ್ಟು 64 ವಿಕೆಟ್ ಪಡೆದಿದ್ದರು. ಆದರೆ ಐಪಿಎಲ್ 2022 ರಲ್ಲಿ ಚಹಲ್ ಅವರನ್ನು ಆರ್ಸಿಬಿ ರಿಲೀಸ್ ಮಾಡಿತ್ತು. ಇದೀಗ ಯುಜ್ವೇಂದ್ರ ಚಹಲ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ.